ADVERTISEMENT

ಪರೋಪಕಾರ ಗುಣ ಮೈಗೂಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:10 IST
Last Updated 8 ಏಪ್ರಿಲ್ 2013, 4:10 IST

ಕೃಷ್ಣರಾಜಪೇಟೆ: ಮನುಷ್ಯ ತನ್ನ ಸ್ವಾರ್ಥವನ್ನು ಬದಿಗೊತ್ತಿ, ಪರೋಪಕಾರ ಗುಣವನ್ನು ಮೈಗೂಡಿಸಿಕೊಂಡು ಕಾರ್ಯೋನ್ಮುಖನಾದರೆ ನೆಮ್ಮದಿ ತಾನಾಗಿಯೇ ಸಿಗುತ್ತದೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಕುಮಾರಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ರಂಗನಾಥಸ್ವಾಮಿ ಪ್ರತಿಷ್ಠಾಪನೆ ಮತ್ತು ಮಹಾದ್ವಾರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ  ಮಾತನಾಡಿದರು.

ಗ್ರಾಮಕ್ಕೆ ಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಸರ್ಕಾರವೇ ಮಾಡಲಿ ಎಂಬ ಧೋರಣೆಯನ್ನು ಜನರು ಬಿಡಬೇಕು. ಜನರು ಒಟ್ಟಾಗಿ ಸೇರಿ ಇಂತಹ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಮಠಗಳು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅಕ್ಷರ. ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಮಠಗಳಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಅಥವಾ ಸರ್ಕಾರ ನೆರವಾದರೆ ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ನುಡಿದರು.

ಮಹಾದ್ವಾರವನ್ನು ಉದ್ಘಾಟಿಸಿದ ಕಾಪನಹಳ್ಳಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಶಿಕ್ಷಣವು ಅಮೂಲ್ಯ ಆಸ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳಿಗೆ ಹಂಡು ಹೆಣ್ಣು ಎಂಬ ಭೇದಭಾವ ಮಾಡದೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂದರು.

ಶಿರದನಹಳ್ಳಿ ಮಠದ ಶಿವಾನಂದ ಸ್ವಾಮೀಜಿ, ಮಾಜಿ ಶಾಸಕ ಎಂ.ಪುಟ್ಟಸ್ವಾಮಿಗೌಡ, ಗ್ರಾಮದ ಮುಖಂಡರಾದ ಬಿ.ಕೆ.ಕೃಷ್ಣೇಗೌಡ, ಯೋಗಣ್ಣ, ಜವರಪ್ಪ, ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.