ADVERTISEMENT

ಪಶ್ಚಿಮವಾಹಿನಿ: ಏನಾಯ್ತು ಹರಿದ್ವಾರ ಮಾದರಿ?

ಚಾಲನೆ ನೀಡಲಾಗಿದ್ದರೂ ಅರ್ಧಕ್ಕೆ ನಿಂತ ₹ 1 ಕೋಟಿ ವೆಚ್ಚದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2016, 8:34 IST
Last Updated 30 ಸೆಪ್ಟೆಂಬರ್ 2016, 8:34 IST
ಪಶ್ಚಿಮವಾಹಿನಿ: ಏನಾಯ್ತು ಹರಿದ್ವಾರ ಮಾದರಿ?
ಪಶ್ಚಿಮವಾಹಿನಿ: ಏನಾಯ್ತು ಹರಿದ್ವಾರ ಮಾದರಿ?   

ಶ್ರೀರಂಗಪಟ್ಟಣ: ಪಿಂಡ ಪ್ರದಾನ, ತರ್ಪಣ, ಅಸ್ಥಿ ವಿಸರ್ಜನೆಗೆ ಪ್ರಸಿದ್ಧವಾದ ಇಲ್ಲಿನ ಪಶ್ಚಿಮವಾಹಿನಿ ಕ್ಷೇತ್ರ ಅವ್ಯವಸ್ಥೆಯ ಆಗರವಾಗಿದೆ. ಕಾವೇರಿ ನದಿಗೆ ನಿರ್ಮಿಸಿರುವ ಸೋಪಾನ ಕಟ್ಟೆಯ ಕಲ್ಲು ಚಪ್ಪಡಿಗಳು ಕುಸಿದಿವೆ. ಗಣೇಶ ವಿಸರ್ಜನೆ ವೇಳೆ ತಂದು ಹಾಕಿರುವ ತ್ಯಾಜ್ಯ ನೀರಿನಲ್ಲಿ ಕೊಳೆಯುತ್ತಿದ್ದು ಗಬ್ಬು ನಾರುತ್ತಿದೆ. ಮೈಸೂರಿನಿಂದ ತಂದು ಕಾವೇರಿ ನದಿಯಲ್ಲಿ ಮುಳುಗಿಸಿರುವ ಗಣೇಶ ಮೂರ್ತಿಗಳ ಪೈಕಿ ಹತ್ತಾರು ಮೂರ್ತಿ ಗಳು ಕರಗದೇ ಹಾಗೇ ಉಳಿದಿವೆ. ಮಡಕೆ– ಕುಡಿಕೆ ಚೂರುಗಳು, ಬಟ್ಟೆ ಇತರ ತ್ಯಾಜ್ಯ ಎಲ್ಲೆಂದರಲ್ಲಿ ಎರಚಾಡು ತ್ತಿದೆ. ಸ್ವಚ್ಛತೆ ಮರೀಚಿಕೆಯಾಗಿದೆ ಎಂಬುದು ಸ್ಥಳೀಯರ ಆರೋಪ.

ಪಶ್ಚಿಮ ವಾಹಿನಿಯಲ್ಲಿ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ, ಮಾಜಿ ಮುಖ್ಯಮಂತ್ರಿ ರಾಮ ಕೃಷ್ಣ ಹೆಗಡೆ, ಪ್ರಸಿದ್ಧ ಕಾದಂಬರಿಕಾರ್ತಿ ತ್ರಿವೇಣಿ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೊದಲಾದ ಪ್ರಸಿದ್ಧರ ಅಸ್ಥಿ ವಿಸರ್ಜನೆ ನಡೆದಿದೆ. ಈಗಲೂ ದೇಶ, ವಿದೇಶಗಳ ಜನರು ತಮ್ಮ ಬಂಧುಗಳ ಅಸ್ಥಿಯನ್ನು ಇಲ್ಲಿಗೆ ತಂದು ವಿಸರ್ಜನೆ ಮಾಡುವುದು ವಾಡಿಕೆ.

ಪಿತೃಪಕ್ಷದ ಸಮಯದಲ್ಲಿ ಪಶ್ಚಿಮ ವಾಹಿನಿಯಲ್ಲಿ ಕಾಲಿಡಲು ಆಗದಷ್ಟು ಜನ ನೆರೆಯುತ್ತಾರೆ. ನದಿ ಪಶ್ಚಿಮ ದಿಕ್ಕಿಗೆ ಹರಿಯುವುದರಿಂದ, ಪುಣ್ಯ ಕ್ಷೇತ್ರವೆಂದು ಭಾವಿಸಿ ಅಸ್ಥಿ ವಿಸರ್ಜನೆ, ಪಿಂಡ ಪ್ರಧಾನ, ತರ್ಪಣ ಬಿಡಲು ಇಲ್ಲಿಗೆ ಧಾವಿಸುತ್ತಾರೆ. ಮಹಾ ಲಯ ಅಮಾವಾಸ್ಯೆಯ ಆಚೀಚೆ ಈ ತಾಣ ಧಾರ್ಮಿಕ ನಂಬಿಕಸ್ಥರಿಂದ ತುಂಬಿ ಹೋಗುತ್ತದೆ. ಇಂತಹ ಪ್ರಸಿದ್ಧ ತಾಣ ವನ್ನು ಹರಿದ್ವಾರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ಅರ್ಧಕ್ಕೆ ನಿಂತಿದೆ.

₹ 1 ಕೋಟಿ ಕಾಮಗಾರಿ: ಪಶ್ಚಿಮ ವಾಹಿನಿಯನ್ನು ಹರಿದ್ವಾರ ಮಾದರಿ ಯಲ್ಲಿ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ₹ 1 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಎರಡೂವರೆ ವರ್ಷಗಳ ಹಿಂದೆ ಅಂದಿನ ಸಂಸದೆ ರಮ್ಯಾ, ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಇಷ್ಟು ದಿನ ಕಳೆದರೂ ಉದ್ದೇಶಿತ ಕೆಲಸ ಶೇ 20ರಷ್ಟು ಮಾತ್ರ ನಡೆದಿದೆ. ಕಳೆದ ಒಂದೂವರೆ ವರ್ಷದ ಈಚೆಗೆ ಇಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ಕಾವೇರಿ ನದಿ ದಡದಲ್ಲಿ ಎರಡು ಕಿರು ಸೇತುವೆಗಳು ಮತ್ತು ಒಂದು ಕಟ್ಟೆಯನ್ನು ನಿರ್ಮಿಸಿ ಕೆಲಸವನ್ನು ಸ್ಥಗಿತಗೊಳಿಸ ಲಾಗಿದೆ.

‘ಪಶ್ಚಿಮ ವಾಹಿನಿ ತಾಣ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣ ಪುರಸಭೆಗೆ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿ ಮೂಲಕವೇ ಕಾಮಗಾರಿಗೆ ಅನುಮೋದನೆ ನೀಡಿ, ಹಣ ಕೊಟ್ಟು ಕೆಲಸ ಮಾಡ ಲಾಗಿತ್ತು. ಇನ್ನೋವೇಟಿವ್‌ ಫಂಡ್‌ನಲ್ಲಿ ಈ ಕೆಲಸ ಕೈಗೊಳ್ಳಲಾಗಿತ್ತು. ಕಾಮಗಾರಿ ಯನ್ನು ಏಕೆ ನಿಲ್ಲಿಸಲಾಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಪಡೆಯುತ್ತೇವೆ’ ಎಂದು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಎಸ್‌. ಲೋಕೇಶ್‌ ಹೇಳುತ್ತಾರೆ.

‘ಹಲವು ಶತಮಾನಗಳಿಂದಲೂ ಈ ಕ್ಷೇತ್ರದಲ್ಲಿ ಪ್ರೇತ ಸಂಸ್ಕಾರ, ನಾರಾಯಣ ಬಲಿ, ತಿಲ ಹೋಮ, ಅಸ್ಥಿ ವಿಸರ್ಜನೆ, ಪಿಂಡ ಪ್ರಧಾನ ಕಾರ್ಯಗಳು ನಡೆಯು ತ್ತಿವೆ. ಮೈಸೂರು ಒಡೆಯರ್‌ ದೊರೆಗಳು ಶತಮಾನಗಳ ಹಿಂದೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಈಚಿನ ದಿನಗಳಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದರೂ ಈ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹರಿದ್ವಾರ ಮಾದರಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿ ಮಾಡುವುದಾಗಿ ಭೂಮಿಪೂಜೆ ನೆರವೇರಿಸಿ ಅರ್ಧಕ್ಕೆ ನಿಲ್ಲಿಸಿ ಹೋಗಿ ದ್ದಾರೆ’ ಎಂದು ಪಶ್ಚಿಮವಾಹಿನಿಯಲ್ಲಿ ಧಾರ್ಮಿಕ ಕೈಂಕರ್ಯ ನಡೆಸುವ ದೊರೆ ಸ್ವಾಮಿ (ದೊಡ್ಡಸ್ವಾಮಿ) ಅಸಮಾಧಾನ ವ್ಯಕ್ತಪಡಿಸುತ್ತಾರೆ.
- ಗಣಂಗೂರು ನಂಜೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.