ADVERTISEMENT

ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 9:52 IST
Last Updated 6 ಜೂನ್ 2018, 9:52 IST

ನಾಗಮಂಗಲ: ಪರಿಸರದ ಸಮತೋಲನಕ್ಕಾಗಿ ಗಿಡ–ಮರಗಳನ್ನು ಬೆಳೆಸಿದರೆ ನಾಡು ಸಮೃದ್ಧವಾಗಿರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು.

ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ಪುರಸಭೆ ಮತ್ತು ಸರ್ಕಾರಿ ಪಿಯು ಕಾಲೇಜು ಆಯೋಜಿಸಿದ್ದ ‘ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ ಕುರಿತ ಜಾಥಾ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದೆ. ಇದು ಮಣ್ಣಿನಲ್ಲಿ, ನೀರಿನಲ್ಲಿ ಕೊಳೆಯುವುದಿಲ್ಲ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ತೊಡಕನ್ನುಂಟು ಮಾಡುತ್ತದೆ. ಇದರಿಂದ ಸೊಳ್ಳೆಗಳು ಹೆಚ್ಚಿ ಮಲೇರಿಯಾ, ಡೆಂಗಿಯಂಥ ಕಾಯಿಲೆಗಳು ಹರಡಲು ಕಾರಣವಾಗುತ್ತದೆ. ಪ್ಲಾಸ್ಟಿಕ್ ಅನ್ನು ಸುಟ್ಟಾಗ ಬರುವ ವಿಷಾನಿಲ ವಾಯುಮಾಲಿನ್ಯ ಉಂಟು ಮಾಡುತ್ತದೆ ಎಂದು ಹೇಳಿದರು.

ADVERTISEMENT

ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಅದಕ್ಕೆ ಪರ್ಯಾಯವಾಗಿ ಬಟ್ಟೆ ಅಥವಾ ಕಾಗದದ ಚೀಲ, ಪುನರ್ ಬಳಸಬಲ್ಲ ಗ್ಲಾಸ್‌ಗಳನ್ನು ಬಳಸಬಹುದು ಎಂದು ಹೇಳಿದರು.

ನಾಗರಿಕರಲ್ಲಿ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಲಾಯಿತು. ನಂತರ ಪಟ್ಟಣದ ಪುರಾಣ ಪ್ರಸಿದ್ಧ ಹಂಪೆಹರಸನಕೊಳ ಮತ್ತು ಹಿರಿಕೆರೆ ಏರಿ ಮೇಲಿನ ಉದ್ಯಾನವನ್ನು ಸ್ವಚ್ಛಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ, ಉಪನ್ಯಾಸಕ ಸಿ.ಆರ್.ಚಂದ್ರಶೇಖರ್, ಪುರಸಭೆ ಕಂದಾಯ ನಿರೀಕ್ಷಕ ಶಿವಬಸವಯ್ಯ, ಆರೋಗ್ಯ ನಿರೀಕ್ಷಕಿ ಧನಲಕ್ಷ್ಮಿ, ಮೂರ್ತಿ, ನಿಂಗೇಗೌಡ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.