ಶ್ರೀರಂಗಪಟ್ಟಣ: ಕೆಆರ್ಎಸ್ ಜಲಾಶಯದ ನಾಲೆಗಳಲ್ಲಿ ಒಂದಾದ ಬಲದಂಡೆ (ಆರ್ಬಿಎಲ್ಎಲ್) ನಾಲೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ನಾಲೆ ಭಾಗಶಃ ಮುಚ್ಚಿದಂತೆ ಕಾಣುತ್ತಿದೆ.
ತಾಲ್ಲೂಕಿನ ಬೆಳಗೊಳ ಹಾಗೂ ಹೊಸಆನಂದೂರು ಗ್ರಾಮಗಳ ಬಳಿ ನಾಲೆಯ ಒಳಗೆ ಮತ್ತು ಇಬ್ಬದಿಗಳಲ್ಲಿ ಕಳೆಗಿಡಗಳು ಬೆಳೆದಿವೆ. ಕಳೆದ ಎರಡು ತಿಂಗಳಿನಿಂದ ನಾಲೆಯಲ್ಲಿ ನೀರಿನ ಹರಿವು ನಿಂತಿರುವುದರಿಂದ ಯಥೇಚ್ಛವಾಗಿ ಕಳೆಗಿಡಗಳು ಬೆಳೆದಿವೆ. ಕೆಆರ್ಎಸ್ ಜಲಾಶಯ ನೀರು ಹರಿದು ಬರುತ್ತಿರುವುದರಿಂದ ಶೀಘ್ರ ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ಗಿಡಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಮುಂದಿನ ಭಾಗಕ್ಕೆ ಹರಿಯಲು ತೊಡಕಾಗಲಿದೆ.
50 ಕ್ಯೂಸೆಕ್ ನೀರು ಹರಿಸಬಹುದಾದ ಬಲದಂಡೆ ನಾಲೆಯಲ್ಲಿ ಸದ್ಯ 20 ಕ್ಯೂಸೆಕ್ ನೀರು ಕೂಡ ಹರಿಸುವುದು ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಉದ್ದಕ್ಕೂ ಗಿಡಗಳು ಹಾಗೂ ತ್ಯಾಜ್ಯ ತುಂಬಿದೆ. ನೀರು ಸರಾಗವಾಗಿ ಹರಿಯದಿದ್ದರೆ ನಾಲೆಯ ಏರಿ ಶಿಥಿಲವಾಗಿ ನಾಲೆ ಒಡೆಯುವ ಅಪಾಯವೂ ಇರುತ್ತದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬಲದಂಡೆ ನಾಲೆಯನ್ನು ಶೀಘ್ರ ಸ್ವಚ್ಛಗೊಳಿಸಬೇಕು ಎಂದು ಬೆಳಗೊಳ ಗ್ರಾಮದ ಸುನಿಲ್, ವಿಷಕಂಠು ಇತರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.