ADVERTISEMENT

ಬೀದಿ ನಾಯಿ ಕಾರ್ಯಾಚರಣೆಗೆ ಸಮ್ಮತಿ

ನಗರಸಭೆ ಸಾಮಾನ್ಯಸಭೆ: ಅಧ್ಯಯನ ಪ್ರವಾಸಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:31 IST
Last Updated 19 ಡಿಸೆಂಬರ್ 2013, 5:31 IST

ಮಂಡ್ಯ: ಬೀದಿ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲು ಬುಧವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿ ಸಲಾಯಿತು.

ಬೀದಿ ನಾಯಿ ಹಾವಳಿ ತಪ್ಪಿಸಲು ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸಲಾಗುವುದು. ತಪ್ಪು ಎಂದು ಜೈಲಿಗೆ ಹಾಕಿದರೂ ಸರಿ, ಅನರ್ಹ ಗೊಳಿಸಿದರೂ ಸರಿ. ಎದುರಿಸಲು ಸಿದ್ದರಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಹೇಳಿದರು.

ಸದಸ್ಯ ಎಂ.ಜೆ. ಚಿಕ್ಕಣ್ಣ ಮಾತನಾಡಿ, ಬೀದಿ ನಾಯಿಗಳ ಹಾವಳಿ ಜಾಸ್ತಿ ಯಾಗಿದೆ. ನಿಯಂತ್ರಣಕ್ಕೆ ನಗರಸಭೆ ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯೆ ಸುಜಾತಾಮಣಿ ಧ್ವನಿಗೂಡಿಸಿದರು.

ಸದಸ್ಯ ಕೆ.ಸಿ. ರವೀಂದ್ರ ಮಾತನಾಡಿ, ಜನರು ರೊಚ್ಚಿಗೆ ಏಳುವ ಮುನ್ನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯ ಮಹೇಶ್‌ಕೃಷ್ಣ ಮಾತನಾಡಿ, ಸಂತಾನಶಕ್ತಿ ಹರಣ ಮಾಡಿದರೆ ಮುಂದೆ ಸಂತಾನ ಬೆಳೆಯದಂತೆ ತಡೆಯಬಹುದು. ಈಗಿರುವ ನಾಯಿಗಳ ಹಾವಳಿಯನ್ನು ಹೇಗೆ ತಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು.

ಅಧ್ಯಕ್ಷ ಬಿ. ಸಿದ್ದರಾಜು ಮಾತನಾಡಿ, ಎಬಿಸಿ ಮಾಡಲು ಟೆಂಡರ್‌್ ಕರೆದರೂ ಯಾವುದೇ ಗುತ್ತಿಗೆದಾರರು ಮುಂದೆ ಬಂದಿಲ್ಲ. ಎಬಿಸಿ ಬೇಕಾದಷ್ಟು ಹಣವೂ ನಗರಸಭೆಯಲ್ಲಿ ಇಲ್ಲ. ಪ್ರಾಣಿದಯಾ ಸಂಘದವರಿಗೆ ಹೇಳಿದ್ದೇನೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಷ್ಟರೊಳಗೆ ನಮ್ಮ ಅಧಿಕಾರವಧಿ ಮುಗಿದಿರುತ್ತದೆ. ಕೂಡಲೇ ಪರಿಹಾರ ಒದಗಿಸಬೇಕು ಎಂದರು.

ಪೌರಾಯುಕ್ತ ಡಾ.ದಾಸೇಗೌಡ ಮಾತನಾಡಿ, 2012ರಲ್ಲಿ 2 ಸಾವಿರ ನಾಯಿಗಳ ಸಂತಾನಶಕ್ತಿ ಹರಣ ಮಾಡಲು ₨ 14.50 ಲಕ್ಷ ಖರ್ಚಾಗಿದೆ. 1058 ನಾಯಿಗೆ ₨ 1.30 ಲಕ್ಷ ಖರ್ಚಾಗಿದೆ. ಬೇರೆ ನಗರಸಭೆಗಳಲ್ಲಿ ಮಾಹಿತಿ ತೆಗೆದುಕೊಂಡೇ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು.

ಈ ಹಿಂದೆ ಎಬಿಸಿ ಮಾಡಿದ್ದ ತಂಡವೇ ಪ್ರಾಣಿದಯಾ ಸಂಘದ ಹೆಸರಿನಲ್ಲಿ ಪ್ರತಿಭಟನೆ ಮಾಡಿದ್ದರು. ಟೆಂಡರ್‌ ಹಾಕಲೂ ಉತ್ಸುಕರಾಗಿದ್ದರು. ನಂತರ ಬೆಳವಣಿಗೆಗಳಿಂದಾಗಿ ಹಿಂದೆ ಸರಿದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.

ರಸ್ತೆ ಬದಿ ವ್ಯಾಪಾರಿಗಳ ಎತ್ತಂಗಡಿ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಕಾರ್ಯಾಚರಣೆ ಏನಾಗಿದೆ ಎಂದು ಸದಸ್ಯ ಚಿಕ್ಕಣ್ಣ, ಚಂದ್ರಕುಮಾರ್‌್, ಸೋಮಶೇಖರ್‌ ಕೆರಗೋಡು ಮತ್ತಿತರರು ಪ್ರಶ್ನಿಸಿದರು.

ಅಧ್ಯಯನ ಪ್ರವಾಸಕ್ಕೆ ಒಪ್ಪಿಗೆ: ಎಲ್ಲ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.