ADVERTISEMENT

ಬೂಕನಕೆರೆಗೆ ತಹಶೀಲ್ದಾರ್ ಭೇಟಿ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 8:35 IST
Last Updated 22 ಮಾರ್ಚ್ 2012, 8:35 IST

ಕೃಷ್ಣರಾಜಪೇಟೆ: ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಕೆ ಮಾಡುವಲ್ಲಿ ಸ್ಥಳೀಯ ಗ್ರಾ.ಪಂ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ತಾಲ್ಲೂಕಿನ ಬೂಕನಕೆರೆಗೆ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಮತ್ತು ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಮೌಳಿ ಮತ್ತು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜನರಿಗೆ ಪೂರೈಸಲಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾದ ಸ್ಥಿತಿಯಲ್ಲಿಲ್ಲ. ನೀರನ್ನು ಸಂಗ್ರಹಿಸುವ ಓವರ್‌ಹೆಡ್ ಟ್ಯಾಂಕನ್ನು ಬಹಳ ದಿನಗಳಿಂದ ಶುಚಿಗೊಳಿಸಿಲ್ಲ.

ಇದರಿಂದಾಗಿ ಮನೆಗಳ ಕೊಳಾಯಿಗಳಲ್ಲಿ ಪಾಚಿಮಿಶ್ರಿತ ವಾದ ನೀರು ಬರುತ್ತಿದೆ. ಬಿಸಿಲಿನ ಬೇಗೆಯಿಂದಾಗಿ ಬೇರೆ ನೀರಿನ ಮೂಲಗಳು ಇಲ್ಲದ ಕಾರಣ ಜನರು ಅನಿವಾರ್ಯವಾಗಿ ಇದೇ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಇದೆ.
 
ಬೇಸಿಗೆ ಕಾರಣದಿಂದ ಅಶುದ್ಧ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಕೂಡಲೇ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾ.ಪಂ ಕಚೇರಿಗೆ ಬೀಗ ಜಡಿದು ಮಂಗಳವಾರದಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಕೊಳಾಯಿಯಲ್ಲಿ ಬರುತ್ತಿರುವ ಕಲುಷಿತ ನೀರನ್ನು ಪ್ರದರ್ಶಿಸಿದರು. ಸಂಬಂಧಿಸಿದ ಸಿಬ್ಬಂದಿ ವರ್ಗದವರ ಮೇಲೆ ಸೂಕ್ತಕ್ರಮವನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಪ್ರತಿಭಟನೆ ನಿಲ್ಲದ ಕಾರಣ ಅಧಿಕಾರಿಗಳು ಹಿಂದಿರುಗಿದ್ದಾರೆ.
 
ಜಿಲ್ಲಾಧಿಕಾರಿ ಇಲ್ಲವೇ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಬರಬೇಕು ಎಂಬು ದು ಪ್ರತಿಭಟನಾಕಾರರ ಒತ್ತಾಯವಾಗಿದೆ. ಗ್ರಾ.ಪಂ ಸದಸ್ಯ ಅಂಗಡಿ ನಾಗರಾಜು, ಮುಖಂಡರಾದ ಟ್ರ್ಯಾಕ್ಟರ್ ರವಿ, ಕಾಯಿ ಮಂಜುನಾಥ್, ಮಧುಸೂಧನ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.