ADVERTISEMENT

ಭರವಸೆ: ಪ್ರತಿಭಟನೆ ಕೈಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:15 IST
Last Updated 8 ಜನವರಿ 2014, 5:15 IST

ಮದ್ದೂರು: ಸಮೀಪದ ಶಿವಪುರದ ಬಳಿ ಜೋಡಿ ರೈಲು ಕಾಮಗಾರಿಗೆ ಭೂಮಿ ನೀಡಿದ್ದ ರೈತರು ನಡೆಸುತ್ತಿರುವ ಪ್ರತಿಭಟನಾ ಧರಣಿಯನ್ನು ಮಂಗಳ­ವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೈತರು ತಾತ್ಕಾಲಿಕವಾಗಿ ಹಿಂಪಡೆದರು.

ಕಳೆದ 24ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದು, ಜೋಡಿ ರೈಲು ಹಳಿ ಕಾಮಗಾರಿ ಕಳೆದ 24ದಿನಗಳಿಂದ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ  ಧರಣಿ ಸ್ಥಳಕ್ಕೆ  ಜಿಲ್ಲಾಧಿಕಾರಿ          ಬಿ.ಎನ್. ಕೃಷ್ಣಯ್ಯ ನೇತೃತ್ವದಲ್ಲಿ ಆಗಮಿಸಿದ ರೈಲ್ವೆ ವಿಭಾಗೀಯ ಇಂಜಿನಿಯರ್ ಚಂದ್ರಶೇಖರ್ ಅವರು ರೈತರನ್ನು ಭೇಟಿ ಮಾಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೃಷ್ಣಯ್ಯ ರೈತರ ಜತೆ ಮಾತನಾಡಿ,  ‘ರೈಲ್ವೆ ಇಲಾಖೆಯಿಂದ ರೈತರಿಗೆ ಪರಿಹಾರ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗೆ ₨4 ಕೋಟಿ ಪರಿಹಾರ ಹಣ ಬಂದಿದೆ. ನೀವು ಇನ್ನಷ್ಟು ಹೆಚ್ಚಿನ ಹಣ ಬರಬೇಕೆಂದು ನ್ಯಾಯಾ ಲಯಕ್ಕೆ ದಾವೆ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆ ಇದೇ ಜ.17ರಂದು ನಡೆಯಲಿದೆ.

ಅಲ್ಲಿ ತೀರ್ಮಾನವಾದಂತೆ ಪರಿಹಾರ ನೀಡಲು ರೈಲ್ವೆ ಇಲಾಖೆ ಬದ್ಧವಾಗಿದೆ. ಜ. 27ರೊಳಗಾಗಿ ನಿಮಗೆ ಸೂಕ್ತ ಪರಿಹಾರ ದೊರಕಲಿದ್ದು,  ಅಲ್ಲಿಯವರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ  ರೈಲು ಹಳಿ ನಿರ್ಮಾಣ ಕಾಮಗಾರಿ ನಡೆಯಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ರೈತರು ಅಂತಿಮವಾಗಿ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲು ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.