ಮಳವಳ್ಳಿ: ಗ್ರಾಮದಲ್ಲಿರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ನಿರ್ಧಾರ ಕೈಗೊಳ್ಳಲಾಯಿತು.
ತಾಲ್ಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ದೊಡ್ಡಗ್ರಾಮದಲ್ಲಿ ಹಲವು ಕಿರಾಣಿ ಅಂಗಡಿಗಳಿದ್ದು, ಅವುಗಳಲ್ಲಿ ಅನಧಿಕೃತ ವಾಗಿ ಮದ್ಯ ಮಾರಾಟ ಮಾಡಲಾ ಗುತ್ತಿದೆ. ಇದರಿಂದ ಜನರ ಗಲಾಟೆ ಹೆಚ್ಚಾಗಿದ್ದು, ಶಾಂತಿಗೆ ಭಂಗವಾಗುತ್ತಿದೆ. ಇದನ್ನು ತಡೆಯಲು ಸಭೆ ಕರೆಯಲಾಗಿತ್ತು.
ಸಭೆಯ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹದೇವಯ್ಯ, ಮದ್ಯ ಮಾರಾಟ ಮಾಡಬಾರದೆಂದು ಗ್ರಾಮ ದಲ್ಲಿ ಸಭೆ ಸೇರಿ ಚರ್ಚಿಸುತ್ತಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ರಮ ನನಗೂ ಮೊದಲನೆ ಯದಾಗಿದ್ದು, ಮದ್ಯಪಾನದಿಂದ ಆರ್ಥಿಕ ಹಾಗೂ ಆರೋಗ್ಯ ಸ್ಥಿತಿ ಹದಗೆಡುವುದು ಖಂಡಿತ. ಈ ನಿಟ್ಟಿನಲ್ಲಿ ಮದ್ಯ ಮಾರಾಟ ಮಾಡದಂತೆ ನಿರ್ಣಯಿಸುತ್ತಿರುವುದು ಉತ್ತಮ ಕೆಲಸ ಎಂದು ಹೇಳಿದರು.
ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಪ್ರತಾಪರೆಡ್ಡಿ ಮಾತನಾಡಿ, ಕಾನೂನುಗಳು ಅನುಷ್ಠಾನಗೊಳ್ಳ ಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಅನಧಿಕೃತ ಮದ್ಯ ಮಾರಿದರೆ ಅಬಕಾರಿ ಕಾನೂನು ಕಠಿಣವಾಗಿದ್ದು, ಮೊದಲನೆ ಪ್ರಕರಣದಲ್ಲಿ 3 ವರ್ಷ ಸೆರೆವಾಸ ಹಾಗೂ 25 ಸಾವಿರ ರೂ.ದಂಡ ವಿಧಿಸಬಹುದು. ಇದು ಜನರು ದೂರು ಕೊಟ್ಟಾಗ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಮಹದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರಾಜಮಣಿ, ಗ್ರಾಮಾಂತರ ಪೊಲೀಸ್ಠಾಣೆ ಪಿಎಸ್ಐ ಎಂ.ಜೆ.ಲೋಕೇಶ್, ಅಬಕಾರಿ ಇಲಾಖೆ ಅಧಿಕಾರಿ ನರಸಿಂಹಮೂರ್ತಿ, ಮುಖಂಡರಾದ ಪ್ರಕಾಶ್, ಪುಟ್ಟಬುದ್ದಿ, ನಂದೀಶ್, ಬಿ.ಎನ್.ರಮೇಶ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ಬಾಬು ಹಾಗೂ ಗ್ರಾಮದ ಯಜಮಾನರುಗಳು ಇದ್ದರು.
ಸಭೆಯ ನಂತರ ಮಹಿಳೆಯರು, ಮುಖಂಡರು, ಯಜಮಾನರು ಸೇರಿದಂತೆ ಹಲವರು ಮದ್ಯಪಾನದಿಂದ ಆಗುವ ಅನಾಹುತಗಳ ಬಗ್ಗೆ ಘೋಷಣೆ ಕೂಗುತ್ತಾ ಗ್ರಾಮದ ರಸ್ತೆಗಳಲ್ಲಿ ಜಾಥಾ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.