ಮದ್ದೂರು: ತಾಲ್ಲೂಕಿನ ಮಾಚಹಳ್ಳಿ ಕೆರೆಗೆ ಶಿಂಷಾನದಿಯಿಂದ ನೀರು ತುಂಬಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘದ ಸದಸ್ಯರು ಗುರುವಾರ ತಾಲ್ಲೂಕು ಕಚೇರಿಗೆ ಎದುರು ಪ್ರತಿಭಟನೆ ನಡೆಸಿದರು.
ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಶೀಲ್ದಾರ್ ರಾಮಪ್ಪ ಹಾಗೂ ಸಣ್ಣನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೊಡ್ಡಬೀರಯ್ಯ ಅವರಿಗೆ ಮನವಿ ಸಲ್ಲಿಸಿ ಅಗತ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಅಂದಾಜು 600ಎಕರೆಗೆ ನೀರುಣಿಸುವ ಮಾಚಹಳ್ಳಿ ಕೆರೆಯಲ್ಲಿ ಮಳೆಯಿಲ್ಲದೇ ಒಣಗಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಇದೀಗ ಮಳೆಯಿಂದಾಗಿ ಶಿಂಷಾನದಿ ತುಂಬಿ ಹರಿಯತ್ತಿದ್ದು, ನದಿಯಿಂದ ಕೆರೆಗೆ ನೀರು ತುಂಬಿಸಲು ಇಲಾಖೆ ಮುಂದಾಗಬೇಕು.
ಸ್ಥಗಿತಗೊಂಡಿರುವ ಮಾಚಹಳ್ಳಿ ಏತನೀರಾವರಿ ಯೋಜನೆಯ ಪೈಪುಗಳು ಹಾಗೂ ಯಂತ್ರಗಳ ಬದಲಾವಣೆ ಕಾರ್ಯ ಕೈಗೊಂಡು ಯೋಜನೆ ಪುನಶ್ಚೇತನಗೊಳಿಸಲು ಮುಂದಾಗಬೇಕು ಎಂದು ಸಂಘದ ಕಾರ್ಯದರ್ಶಿ ಟಿ. ಯಶವಂತ್ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಚಂದ್ರಮ್ಮ, ಯಶೋದಮ್ಮ, ರವಿ, ಗಂಗಾಧರ್, ರಾಜು, ವೆಂಕಟೇಶ್, ಜಯಮ್ಮ, ರತ್ನಮ್ಮ, ದಾಸೇಗೌಡ, ರಾಜಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.