ADVERTISEMENT

ಮೂಲಸೌಲಭ್ಯ ವಂಚಿತ ಸನ್ಯಾಸಿಪುರ

ಪ್ರಜಾವಾಣಿ ವಿಶೇಷ
Published 18 ಜನವರಿ 2012, 10:40 IST
Last Updated 18 ಜನವರಿ 2012, 10:40 IST

ಕೆ.ಆರ್.ನಗರ: ತಾಲ್ಲೂಕಿನ ಸನ್ಯಾಸಿಪುರ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದೆ. ಗ್ರಾಮದಲ್ಲಿ
ತಾಲ್ಲೂಕು ಕೇಂದ್ರದಿಂದ ಸುಮಾರು 3ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಅಲ್ಲದೇ ಇಲ್ಲಿ ದಲಿತರೇ ಹೆಚ್ಚಾಗಿ ವಾಸವಾಗಿದ್ದಾರೆ.

ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿಗಳು ರಾರಾಜಿಸುತ್ತವೆ. ಒಳಚರಂಡಿಗಳು ಸಮರ್ಪಕವಾಗಿ ನಿರ್ಮಾಣವಾಗಿಲ್ಲ. ಒಳಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿದ್ದು, ಇದರಿಂದ ಕೊಳಚೆ ನೀರು ಸರಾಗವಾಗಿ ಹೋಗಲು ಸಾಧ್ಯವಿಲ್ಲದೇ ಚರಂಡಿಯಲ್ಲಿಯೇ ನಿಲ್ಲುತ್ತದೆ. ಇದರಿಂದ ಗ್ರಾಮಸ್ಥರ ಮನೆಯ ಮುಂದೆ ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದಿವೆ.

ಗ್ರಾಮದಲ್ಲಿ ಯಾವೊಂದು ರಸ್ತೆಗಳು ಡಾಂಬರು ಕಂಡಿಲ್ಲ. ವಾಹನ ಸವಾರರು ಹಳ್ಳ-ಕೊಳ್ಳಗಳ ರಸ್ತೆಯಲ್ಲಿ ಸಂಚರಿಸಬೇಕಿದೆ. ಗ್ರಾಮದ ಜನರು ಕುಡಿಯುವ ನೀರಿಗೆ ಬೋರ‌್ವೆಲ್ ಅವಲಂಬಿಸಿದ್ದಾರೆ. ಗ್ರಾಮದ ಪಕ್ಕದಲ್ಲಿ ಕಾವೇರಿ ನೀರು ಹರಿದರೂ ಗ್ರಾಮದ ಜನರಿಗೆ ಕುಡಿಯುವ ನೀರಿನ ಭಾಗ್ಯ ಇಲ್ಲ. ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಆರೋಗ್ಯ ಕೇಂದ್ರ ಇಲ್ಲ. ಚಿಕಿತ್ಸೆಗಾಗಿ ಹಂಪಾಪುರಕ್ಕೆ ಬರಬೇಕು. 

ಕೆಆರ್‌ಡಿಸಿಎಲ್ ನವರು ರಸ್ತೆ ಅಭಿವೃದ್ಧಿಪಡಿಸುವ ಮುನ್ನ ಸನ್ಯಾಸಿಪುರ ಗ್ರಾಮದ ಮೂಲಕವೇ ಮೈಸೂರು-ಹಾಸನಕ್ಕೆ ತೆರಳುವ ಎಲ್ಲ ವಾಹನಗಳು ತೆರಳಬೇಕಿತ್ತು. ಕೆಲವು ವರ್ಷಗಳ ಹಿಂದೆ ಕೆಆರ್‌ಡಿಸಿಎಲ್‌ನವರು ರಸ್ತೆ ಅಭಿವೃದ್ಧಿ ಪಡಿಸುವಾಗ (ಸನ್ಯಾಸಿಪುರ ಗ್ರಾಮದಿಂದ ಸ್ವಲ್ಪ ದೂರದಲ್ಲಿ) ಬೈಪಾಸ್ ರಸ್ತೆ ಮಾಡಿದರು. ಇದರಿಂದ ದಿನವಿಡೀ ಜನಸಂದಣಿಯಿಂದ ಕೂಡಿರುತ್ತಿದ್ದ ಸನ್ಯಾಸಿಪುರ ಇಂದು ಭಿಕೋ ಎನ್ನುತ್ತಿದೆ. ವಾಹನದಲ್ಲಿ ತೆರಳುವಾಗ ಎಲ್ಲರ ಕಣ್ಣಿಗೆ ಕಾಣುತ್ತಿದ್ದ ಗ್ರಾಮ ಇಂದು ಕಣ್ಣಿಗೆ ಬೀಳದಂತಾಗಿದೆ. ಇದರಿಂದ ಸಂಪೂರ್ಣ ನಿರ್ಲಕ್ಷತೆಗೆ ಒಳಗಾದ ಈ ಗ್ರಾಮದ ಸಮಸ್ಯೆಗಳು ಕೂಡ ಯಾರ ಕಣ್ಣಿಗೂ ಕಾಣುತ್ತಿಲ್ಲ.

ರಸ್ತೆಗೆ ಡಾಂಬರು ಹಾಕಿದ ಉದಾಹರಣೆ ಇಲ್ಲ. ಚರಂಡಿ ಇಲ್ಲ. ಇರುವ ಕೆಲವು ಚೆರಂಡಿಗಳು ಬಳಕೆಯಾಗದೇ ಕಟ್ಟಿಕೊಂಡಿವೆ. ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ಸಂಭಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.