ADVERTISEMENT

ಮೂವರು ಸಾಧಕರಿಗೆ ನಾಗೇಗೌಡ ಸ್ಮಾರಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 9:50 IST
Last Updated 2 ಫೆಬ್ರುವರಿ 2011, 9:50 IST

ಮಂಡ್ಯ: ಪಶು ಸಂಗೋಪನೆ, ನೀರಾವರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಾಜಿ ಸಚಿವ ದಿ. ಕೆ.ಎನ್.ನಾಗೇಗೌಡ ‘ಆಧುನಿಕ ಏಕಲವ್ಯ’ ಎಂದು ಮಾಜಿ ಶಾಸಕ ವಿ.ಎಸ್.ಉಗ್ರಪ್ಪ ಬಣ್ಣಿಸಿದರು. ಯುವದನಿ ಸೇವಾ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ‘ದಿ. ಕೆ.ಎನ್.ನಾಗೇಗೌಡರ ಹೆಸರಿನಲ್ಲಿ ನೀಡುವ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಮಂಗಳವಾರ ನಗರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಜನೋಪಯೋಗಿ ಕೆಲಸಗಳ ಮೂಲಕ ಜನಾನುರಾಗಿ ಜನ ಪ್ರತಿನಿಧಿ ಆಗಿದ್ದ ಗೌಡರು, ರಾಜ್ಯಮಟ್ಟದ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೆಲವೇ ಜನರಲ್ಲಿ ಸೇರುತ್ತಾರೆ’ ಎಂದು ಕೊಂಡಾಡಿದರು. ರೈತನ ಬದುಕು ಹಸನಾಗಲು ನೀರಾವರಿ, ಪಶುಸಂಗೋಪನೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಆಗಬೇಕು ಎಂಬ ದೂರದೃಷ್ಟಿ ಇದ್ದ ಅವರು, ಪೂರಕವಾಗಿ ಕಾರ್ಯಕ್ರಮ ರೂಪಿಸುತ್ತಿದ್ದರು ಎಂದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು, ಸಾಧಕರನ್ನು ಗುರುತಿಸಿ ನಾಗೇಗೌಡರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸುವ ಪ್ರತಿಷ್ಠಾನದ ಸೇವೆ ಶ್ಲಾಘನೀಯ ಎಂದರು.ಪ್ರಶಸ್ತಿ ಪ್ರಧಾನ:  ವಿನಯ್ ಕುಲಕರ್ಣಿ (ಪಶು ಸಂಗೋ ಪನೆ); ಬಸಪ್ಪ ಯಮನಪ್ಪ ಮುಗಳಕೋಡ್ ಮತ್ತು ಗೋವಿಂದಪ್ಪ ಗುಜ್ಜನವರ (ನೀರಾವರಿ) ಅವರಿಗೆ ನಾಗೇಗೌಡ ಸಮಾಜ ಸೇವಾ ಪ್ರಶಸ್ತಿಯನ್ನು ಶಾಸಕ ಬಸವರಾಜ ಹೊರಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿ ತಲಾ  10 ಸಾವಿರ ನಗದು, ಪ್ರಶಸ್ತಿ ಫಲಕ, ಪತ್ರಒಳಗೊಂಡಿದೆ.ಶಾಸಕರಾದ ಎಂ.ಶ್ರೀನಿವಾಸ್, ಅಶ್ವತ್ಥ ನಾರಾಯಣ, ನಾಗೇಗೌಡರ ಪತ್ನಿ ಮಾಜಿ ಶಾಸಕಿ ನಾಗಮಣಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್. ಎಸ್. ಮುದ್ದೇಗೌಡ, ಯುವದನಿ ಪ್ರತಿಷ್ಠಾನದ ಎಂ.ಕೃಷ್ಣ, ನಗರಸಭೆ ಸದಸ್ಯೆ ಕೆ.ಸಿ.ನಾಗಮ್ಮ, ಶ್ರೀನಿವಾಸ ಶೆಟ್ಟಿ, ಮುರಳೀಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.