ADVERTISEMENT

ಮೇಲುಕೋಟೆ ಅಭಿವೃದ್ಧಿಗೆ 12 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:35 IST
Last Updated 14 ಸೆಪ್ಟೆಂಬರ್ 2011, 9:35 IST

ಮೇಲುಕೋಟೆ: ಜಿಲ್ಲೆಯ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ 12 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದು, ಮೊದಲ ಹಂತವಾಗಿ 2 ಕೋಟಿ ಬಿಡುಗಡೆಯಾಗಿದೆ ಎಂದು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ನಂದಕುಮಾರ್ ತಿಳಿಸಿದರು.

ಮಂಗಳವಾರ ಸಂಸ್ಕೃತ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಮೇಲುಕೋಟೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಅನುದಾನದಲ್ಲಿ ಮುಂಬರುವ ವೈರಮುಡಿ ಉತ್ಸವದ ವೇಳೆಗೆ ಈ ಧಾರ್ಮಿಕ ಕ್ಷೇತ್ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದು,ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದರೂ ಸಹ ಮೇಲುಕೋಟೆಯಲ್ಲಿ ಭಕ್ತರಿಗೆ ಯಾವುದೇ ಮೂಲ ಸೌಲಭ್ಯ ಇಲ್ಲ. ರೂ. 12 ಕೋಟಿ ವಿಶೇಷ ಅನುದಾನದಲ್ಲಿ ವಿವಿಧ ಇಲಾಖೆಯಿಂದ ಕೈಗೊಳ್ಳಬಹುದಾದ ಕಾಮಗಾರಿಗಳ ನೀಲನಕ್ಷೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಈ ರೂಪುರೇಷೆಯನ್ನು ಅಂತಿಮಗೊಳಿಸಿ ಮುಂದಿನ ಸಭೆಯಲ್ಲಿ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರ ಸಮಗ್ರ ನೀಲನಕ್ಷೆಯನ್ನು ಸಾರ್ವಜನಿಕರ ಮುಂದಿಟ್ಟು ಪಾರದರ್ಶಕವಾಗಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ  ಭಕ್ತರಿಗಾಗಿ ಕೈಗೊಳ್ಳುವ ಕಾಮಗಾರಿ  ಮಾರ್ಚ ಅಂತ್ಯಕ್ಕೆ ಮುಗಿಯಲಿದೆ ಎಂದರು

ಅನುದಾನದ ಹಂಚಿಕೆ ವಿವರ: ವಿವಿಧ ಕಾಮಗಾರಿ ಗಳಿಗೆ ಅನುದಾನದ ಹಂಚಿಕೆ ಮಾಡಿರುವ ವಿವರ ನೀಡಿದ ನಂದಕುಮಾರ್, ಯೋಗನರಸಿಂಹಸ್ವಾಮಿ ಬೆಟ್ಟದ ಮೆಟ್ಟಿಲುಗಳನ್ನು  ಮರುಜೋಡಿಸಿ ಕಂಬಿ ಅಳವಡಿಸಲು 82 ಲಕ್ಷ ರೂ, ಚೆಲುವ ದೈವೀವನ ನಿರ್ಮಾಣದ ಸಲುವಾಗಿ ಅರಣ್ಯ ಇಲಾಖೆಗೆ 81 ಲಕ್ಷರೂ, ಯೋಗನರಸಿಂಹಸ್ವಾಮಿ ಬೆಟ್ಟದ ನೀರು ಸರಭರಾಜು ಕಾಮಗಾರಿಗೆ 3.57ಲಕ್ಷರೂ, ರಾಜಗೋಪುರ ನವೀಕರಣಕ್ಕೆ 135 ಲಕ್ಷರೂ ಸ್ಟೇಷನ್ ಸರ್ವೆ ನಕ್ಷೆ ಮತ್ತು ಸಿ.ಡಿ ತಯಾರಿಕೆಗೆ 3ಲಕ್ಷರೂ, ವಾಣಿಜ್ಯಮಳಿಗೆ ನಿರ್ಮಾಣ ಮತ್ತು ಕಲ್ಯಾಣಿಗಳ  ಜೀರ್ಣೋದ್ಧಾರ ಕಾಮಗಾರಿಗೆ 103 ಲಕ್ಷರೂ, ನಗರ ನೀರು ಸರಭರಾಜು ಮತ್ತು ಒಳಚರಂಡಿ ಕಾಮಗಾರಿಗೆ 450 ಲಕ್ಷರೂ ಚೆಲುವರಾಯಸ್ವಾಮಿಯ ನೂತನ ರಥ ನಿರ್ಮಾಣಕ್ಕೆ 62 ಲಕ್ಷರೂ, ತೆಪ್ಪದ ನಿರ್ಮಾಣಕ್ಕೆ 14 ಲಕ್ಷರೂ ರಾಮಾನುಜರ ಸನ್ನಿಧಿ ಮುಂಭಾಗದ ದುರಸ್ಥಿಗೆ 10 ಲಕ್ಷರೂ ಕಾರ್ಯನಿರ್ವಾಹಕ ಅಧಿಕಾರಿ ವಸತಿಗೃಹ ನಿರ್ಮಾಣಕ್ಕೆ 30 ಲಕ್ಷರೂ ನಿಗದಿ ಮಾಡಲಾಗಿದೆ ಎಂದರು
ಅಧ್ಯಕ್ಷರ ದೇಣಿಗೆ: ಮೇಲುಕೋಟೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿನಾರಾಯಣ್ ಸಹ ದೇಗುಲದ ಅಭಿವೃದ್ಧಿಗೆ 65 ಲಕ್ಷರೂ ದೇಣಿಗೆ ನೀಡುತ್ತಿದ್ದು, ಅದರಲ್ಲಿ ನಾಲ್ಕು ವಾಹನಗಳನ್ನು ಮಾಡಿಸುವುದರ ಜೊತೆಗೆ ನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳ ಗರ್ಭಗೃಹಗಳ ಬಾಗಿಲುಗಳಿಗೆ ಬೆಳ್ಳಿಯ ಲೇಪನ ಮಾಡಿಸಲಾಗುತ್ತದೆ ಎಂದರು

ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರು, ಅನ್ನದಾನ ಭವನ ನಿರ್ಮಿಸಿದರೆ 365 ದಿನಕ್ಕೂ ಸಹ ಅನ್ನದಾನ ಮಾಡುವ ದಾನಿಗಳ ಪಟ್ಟಿ ಸಿದ್ಧವಿದೆ. ನೆರವು ನೀಡಲು ಅಮೆರಿಕ ದಲ್ಲಿರುವ ಮೇಲುಕೋಟೆ ದೇವಾಲಯದ ಭಕ್ತರು ಮುಂದಾಗಿದ್ದಾರೆ. ಯೋಜಿಸಿರುವ ಕಾಮಗಾರಿ ಗಳನ್ನೂ ಜಾತ್ರೆಯವೇಳೆಗೆ ಮುಕ್ತಾಯಗೊಳಿಸಬೇಕು ಎಂದರು

ಸದಸ್ಯರಾದ ಸುರೇಂದ್ರಕೌಲಗಿ, ಅಟ್ಟಾವರ ರಾಮದಾಸ್, ತೈಲೂರು ವೆಂಕಟಕೃಷ್ಣ, ಗ್ರಾ.ಪಂ.ಅಧ್ಯಕ್ಷೆ ಮಣಿಮುರುಗನ್, ಮುಜರಾಯಿ ಸಹಾಯಕ ರಾಮು, ದೇವಾಲಯದ ಅಧಿಕಾರಿ ಧನಲಕ್ಷ್ಮಿ, ತಹಶೀಲ್ದಾರ್ ಶಿವಾನಂದಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.