ADVERTISEMENT

ಮೇವು ಬ್ಯಾಂಕ್ ಸ್ಥಾಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 9:10 IST
Last Updated 7 ಆಗಸ್ಟ್ 2012, 9:10 IST

ಮಂಡ್ಯ: ಗೋಶಾಲೆಗಳು ತೆಗೆಯುವುದು ಬೇಡ. ಬೆಲೆ ಬಾಳುವ ಹಸುಗಳನ್ನು ಜಿಲ್ಲೆಯ ರೈತರು ಗೋಶಾಲೆಗಳಲ್ಲಿ ಬಿಡುವುದಿಲ್ಲ. ಮೇವು ಬ್ಯಾಂಕ್ ಸ್ಥಾಪಿಸಿ, ಆ ಮೂಲಕ ರೈತರಿಗೆ ಮೇವು ವಿತರಿಸಬೇಕು ಎಂದು ಶಾಸಕರಾದ ಸಿ.ಎಸ್. ಪುಟ್ಟರಾಜು, ಸುರೇಶ್‌ಗೌಡ ಒತ್ತಾಯಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗೋಶಾಲೆಯನ್ನು ರೈತರು ಒಪ್ಪುವುದಿಲ್ಲ. ಆದ್ದರಿಂದ ಬ್ಯಾಂಕ್ ಮೂಲಕ ಪೂರೈಸಬೇಕು ಎಂದು ಆಗ್ರಹಿಸಿದರು.

ನಾಗಮಂಗಲ ತಾಲ್ಲೂಕಿನ ಆರೂ ಹೋಬಳಿಗಳಲ್ಲಿ ಮೇವಿನ ಸಮಸ್ಯೆ ಇದೆ. ಮೇವು ಹಂಚಿಕೆಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸುರೇಶಗೌಡ ಮನವಿ ಮಾಡಿದರು.ಮದ್ದೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿಯೂ ಮೇವಿನ ಕೊರತೆ ಇದೆ. ಆದರೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯಲ್ಲಿ ಮೇವಿನ ಕೊರತೆ ಇದೆ. ನಿವಾರಣಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ನಾಗಮಂಗಲ ತಾಲ್ಲೂಕಿನಲ್ಲಿ ಮೇವಿನ ಸಂಗ್ರಹ ಮಾಡಲಾಗುತ್ತಿದೆ. ಮೇವು ಬೆಳೆಯ 11 ಸಾವಿರ ಮಿನಿಕಿಟ್‌ಗಳನ್ನು ರೈತರಿಗೆ ವಿತರಿಸಿ, ಮೇವು ಬೆಳೆಯುವ ಉದ್ದೇಶ ಹೊಂದಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ ಯೋಗೇಶ್ವರ್ ಮಾತನಾಡಿ, ಮೇವು ಬೆಳೆಯುವ ಜವಾಬ್ದಾರಿ ಕೃಷಿ ಇಲಾಖೆ ತೆಗೆದುಕೊಳ್ಳಬೇಕು. ಯಾವ ರೈತರು ನೀರಾವರಿ ಸೌಲಭ್ಯ ಹೊಂದಿದ್ದಾರೆ. ಮೇವು ಬೆಳೆಯುತ್ತಾರೆಯೋ, ಇಲ್ಲವೋ ನಿಮಗೆ ಗೊತ್ತಾಗುತ್ತದೆ ಎಂದರು. ಶಾಸಕ ನರೇಂದ್ರಸ್ವಾಮಿ ಮಾತನಾಡಿ, ತೋಟಗಾರಿಕೆ ಇಲಾಖೆಯ ಫಾರ್ಮ್‌ಗಳಲ್ಲಿಯೂ ಹುಲ್ಲು ಬೆಳೆಯಿಸಬೇಕು. ಜಿಲ್ಲೆಗೆ ಸಾಕಾಗುವಷ್ಟು ಅಲ್ಲಿ ಬೆಳೆಯಬಹುದಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮರ್ ನಾರಾಯಣ ಮಾತನಾಡಿ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಯವರು ಜಂಟಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

268 ಕೋಟಿ ನಷ್ಟ: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ 268 ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ಕಬ್ಬಿನ ಬೆಳೆ ನಷ್ಟದಿಂದ 263 ಕೋಟಿ ರೂಪಾಯಿಗಳಾಗಿದ್ದರೆ, ಉಳಿದ ಬೆಳೆಗಳಿಂದ 5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಂಗಯ್ಯ ತಿಳಿಸಿದರು.

ಬೆಳೆ ನಷ್ಟ ಹಾಗೂ ಪರಿಹಾರ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವ ಯೋಗೇಶ್ವರ ಭರವಸೆ ನೀಡಿದರು.

ಪಡಿತರ ಚೀಟಿ: ಗ್ರಾಮೀಣ ಪ್ರದೇಶದಲ್ಲಿ ಪಡಿತರ ಚೀಟಿ ವಿತರಣೆ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ  ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇದಕ್ಕೆ ತಹಶೀಲ್ದಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ವಿದ್ಯುತ್, ಇಂಟರ್‌ನೆಟ್ ಸಮಸ್ಯೆಯಿಂದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥೆ ಮಾಡಲು ಅನುದಾನವೂ ಇಲ್ಲ ಎಂದು ತಹಶೀಲ್ದಾರ್ ವಿವರಿಸಿದರು. ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಚಿವರು, ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದರು.

ಮಂಡ್ಯಕ್ಕೆ ಬೈಪಾಸ್ ರಸ್ತೆ: ಅಶ್ವತ್ಥ ನಾರಾಯಣ ಮನವಿ
ಮಂಡ್ಯ:
`ಈ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲ. ಸುಮ್ಮನೆ ಕುಳಿತುಕೊಳ್ಳಿ~
ಈ ರೀತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಟಿ. ಸುರೇಶ್ ಅವರಿಗೆ ಶಾಸಕ ಎಂ.ಶ್ರೀನಿವಾಸ್ ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ ಮಾತನಾಡಿ, ಚನ್ನಪಟ್ಟಣಕ್ಕೆ ಬೈಪಾಸ್ ರಸ್ತೆ ಮಂಜೂರು ಮಾಡಿಸಿಕೊಂಡಿದ್ದೀರಿ. ಮಂಡ್ಯಕ್ಕೂ ಬೈಪಾಸ್ ರಸ್ತೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಟಿ. ಸುರೇಶ್ ಮಾತನಾಡಿ, ಗ್ರೀನ್ ಬೆಲ್ಟ್ ಇದೆ. ಭೂಮಿ ಉಳಿಸಿಕೊಂಡು, ಫ್ಲೈಓವರ್ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಅಶ್ವತ್ಥ್ ಮಾತನಾಡಿ, ಖಾಸಗಿಯವರು ಲೇಔಟ್ ಮಾಡುತ್ತಿದ್ದಾರೆ. ಸುಮ್ಮನಿದ್ದೀರಿ. ಬೈಪಾಸ್ ವಿರೋಧಿಸುತ್ತೀರಿ. ಯಾಕೆ ಎಂದು ಪ್ರಶ್ನಿಸಿದರು.

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮದ್ದೂರಿನಲ್ಲಿ ಬೇಕಾದ್ದು ಮಾಡಿರಿ. ಮಂಡ್ಯದಲ್ಲಿ ಬೈಪಾಸ್ ಮಾಡಿ. ನಗರ ಬೆಳೆಯಬೇಕು. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬರುವಂತಾಗಬೇಕು. ಆದ್ದರಿಂದ ಅಧ್ಯಕ್ಷರು ಈ ವಿಷಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.