ADVERTISEMENT

ಮೈಷುಗರ್, ಪಿಎಸ್‌ಎಸ್‌ಕೆ: ಕಬ್ಬು ಅರೆಯುವಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 9:30 IST
Last Updated 25 ಆಗಸ್ಟ್ 2011, 9:30 IST
ಮೈಷುಗರ್, ಪಿಎಸ್‌ಎಸ್‌ಕೆ: ಕಬ್ಬು ಅರೆಯುವಿಕೆಗೆ ಚಾಲನೆ
ಮೈಷುಗರ್, ಪಿಎಸ್‌ಎಸ್‌ಕೆ: ಕಬ್ಬು ಅರೆಯುವಿಕೆಗೆ ಚಾಲನೆ   

ಮಂಡ್ಯ/ಪಾಂಡವಪುರ: ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಮೈಷುಗರ್ ಮತ್ತು ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿಗೆ ಕಬ್ಬು ಅರೆಯುವ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಲಾಯಿತು.

ಗೃಹ ಸಚಿವ ಆರ್.ಅಶೋಕ್ ಅವರ ಗೈರು ಹಾಜರಿಯಲ್ಲಿ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ವಿದ್ಯಾನಾಗೇಂದ್ರ ಅವರು ಕ್ರಮವಾಗಿ ಪಿಎಸ್‌ಎಸ್‌ಕೆ ಮತ್ತು ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಸಾಗಣೆ ಯಂತ್ರಕ್ಕೆ ಕಬ್ಬು ಎಸೆಯುವ ಮೂಲಕ ಚಾಲನೆ ನೀಡಿದರು.

ಈ ಎರಡೂ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಈಚೆಗೆ ಬೆಂಗಳೂರಿ ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಡ ಹಣವಾಗಿ ಟನ್‌ಗೆ ರೂ. 2000 ರೂಪಾಯಿ ನಿಗದಿಪಡಿಸಲಾ ಗಿತ್ತು, ಈ ಹಿನ್ನೆಲೆಯಲ್ಲಿ ಉಭಯ ಕಾರ್ಖಾನೆಗಳಲ್ಲಿಯೂ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಿದೆ.

ಜಿಲ್ಲೆಯ ಉಳಿದ ಖಾಸಗಿ ಕಾರ್ಖಾನೆಗಳಲ್ಲಿ ಕಬ್ಬಿನ ಇಳುವರಿ ಮತ್ತು ಉಪ ಉತ್ಪನ್ನಗಳನ್ನು ಆಧಾರವಾಗಿ ಇಟ್ಟುಕೊಂಡು ಕಬ್ಬು ದರ ನಿಗದಿಪಡಿಸಬೇಕು ಎಂದು ರೈತ ಸಂಘಟನೆಗಳು, ಕಬ್ಬು ಬೆಳೆಗಾರರು ಆಗ್ರಹಪಡಿಸಿದ್ದು, ಬೆಲೆ ಇನ್ನೂ ನಿಗದಿಯಾಗಬೇಕಿದೆ.

ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ ನೀಡಿದ ಸಂದ ರ್ಭದಲ್ಲಿ ಕಾರ್ಖಾನೆ ಅಧ್ಯಕ್ಷ ನಾಗರಾ ಜಪ್ಪ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಕ್ರವರ್ತಿ ಮೋಹನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಪಿ.ಮಹೇಶ್ ಮತ್ತು ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು ಮತ್ತು ಇತರು ಹಾಜರಿದ್ದರು.

ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ: ಪಾಂಡವಪುರದ ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಬೆಳಿಗ್ಗೆ ಕಬ್ಬು ಅರೆಯುವಿಕೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸಹ ವಿದ್ಯುತ್ ಮತ್ತು ಡಿಸ್ಟಿಲರಿ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧ್ಯಕ್ಷ ನಾಗರಾಜಪ್ಪ ತಿಳಿಸಿದರು.

ಕಳೆದ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ಅರೆದಿದ್ದು, ಈ ವರ್ಷ ಇನ್ನೂ ಹೆಚ್ಚು ಅರೆಯುವ ಗುರಿ ಇದೆ. ಸೀಜನಲ್ ಕಾರ್ಮಿಕರ ಕಾಯಂ ಮತ್ತು  ಕಬ್ಬು ಸರಬರಾಜು ಮಾಡುವ ರೈತರಿಗೆ ಪ್ರತಿ ಟನ್‌ಗೆ ಅರ್ಧ ಕೆಜಿ ಸಕ್ಕರೆಯನ್ನು ಲೆವಿ ರೂಪದಲ್ಲಿ ನೀಡಲಾಗುವುದು ಎಂದರು.

ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ, ಕಾರ್ಖಾನೆಯನ್ನು ಸಹಕಾರಿ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಲು ಎಲ್ಲರು ಶ್ರಮ ವಹಿಸಿ ಹೋರಾಟ ನಡೆಸಬೇಕಾಗಿದೆ ಎಂದರು.

ಮಾಜಿ ಶಾಸಕ ಕೆ.ಕೆಂಪೇಗೌಡ, ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ಜಿಪಂ ಸದಸ್ಯ ಎ.ಎಲ್.ಕೆಂಪೂಗೌಡ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಿರಸಗಿ ನಾಗಪ್ಪ, ವ್ಯಸಸ್ಥಾಪಕ ಆಲ್ಪೋನ್ಸ್ ರಾಜ,  ಕಬ್ಬು ಬೆಳೆಗಾ ರರ ಸಂಘದ ಅಧ್ಯಕ್ಷ ಧನಂಜಯ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಡಿ.ಲಕ್ಷ್ಮೇ ಗೌಡ, ಮುಖಂಡರಾದ ಶ್ರೀಧರ್, ತಮ್ಮಣ್ಣ, ಎಂ.ಆರ್,ಕುಮಾರಸ್ವಾಮಿ, ಪಿಎಸ್‌ಎಸ್‌ಕೆ ಸಂಸ್ಥಾಪಕ ಬಿ.ವೈ.ನೀಲೇ ಗೌಡರ ಪುತ್ರ ವೆಂಕಟೇಶ್ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.