ADVERTISEMENT

ರಾಜಕಾರಣದಲ್ಲಿ ತತ್ವ, ಆದರ್ಶ ಪಾಲನೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 8:10 IST
Last Updated 19 ಜೂನ್ 2012, 8:10 IST
ರಾಜಕಾರಣದಲ್ಲಿ ತತ್ವ, ಆದರ್ಶ ಪಾಲನೆ ಮುಖ್ಯ
ರಾಜಕಾರಣದಲ್ಲಿ ತತ್ವ, ಆದರ್ಶ ಪಾಲನೆ ಮುಖ್ಯ   

ನಾಗಮಂಗಲ: ತತ್ವ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಅತ್ಯಂತ ಅವಶ್ಯ. ಅವುಗಳನ್ನು ರೂಢಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜಕಾರಣಿಗಳ ರಾಜಕೀಯ ಜೀವನ ಹೀನಾಯ ಸ್ಥಿತಿ ತಲುಪಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್ ಹೇಳಿದರು.

ತಾಲ್ಲೂಕಿನ ಬೀರೇಶ್ವರಪುರದಲ್ಲಿ ದೊಡ್ಡಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ  ದಿ.ಟಿ. ಮರಿಯಪ್ಪ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಟಿ.ಮರಿಯಪ್ಪನವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಸ್ವಂತಕ್ಕೆ ಒಂದು ಮನೆ ಕಟ್ಟಿಸಿಕೊಳ್ಳಲಿಲ್ಲ. ನಾಡಿನ ಜನತೆಯ ಹಿತದಲ್ಲಿ ತಮ್ಮ ಸುಖ ಕಂಡರು. ಅಂತಹ ಮಹಾನ್ ವ್ಯಕ್ತಿಯ ಜೀವನ ಪ್ರಸ್ತುತ ರಾಜಕಾರಣಿಗಳಿಗೆ ಅನುಕರಣೀಯ ಎಂದರು. ದೇವಾಲಯದ ಸುತ್ತ ಉತ್ತಮ ಪರಿಸರ ಕಲ್ಪಿಸುವ ವ್ಯವಸ್ಥೆಗೆ ಸಂಪೂರ್ಣ ಸಹಕಾರ ಹಾಗೂ ಮಂಡ್ಯದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ತಮ್ಮ ಅನುದಾನದಲ್ಲಿ 25 ಲಕ್ಷ ರೂಪಾಯಿ ಹಣ ನೀಡುವುದಾಗಿ ತಿಳಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ` ಹಾಲುಮತ ವೈಭವ ~ಎಂಬ ಐತಿಹಾಸಿಕ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು. ಶಾಸಕ ಕೆ.ಸುರೇಶ್‌ಗೌಡ ಮಾತನಾಡಿದರು. ಕಾಗಿನೆಲೆ ಮಹಾಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ ಮತ್ತು ಕಾಳಿಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಟಿ.ಮರಿಯಪ್ಪನವರ ಪುತ್ರ ಟಿ.ಎಂ. ರಾಜಕುಮಾರ್ ಮತ್ತು ಗ್ರಾಮದ ಕೆಎಎಸ್ ಅಧಿಕಾರಿ ಎಂ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.

ಹರಕೆಗೆ 111 ಟಗರುಗಳು: ದೊಡ್ಡಮ್ಮದೇವಿಯ ನೂತನ ದೇವಾಲಯ ಉದ್ಘಾಟನೆಗೆ ರಾಜ್ಯದ ಮೂಲೆ ಮೂಲೆಯಿಂದ 7 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ದೇವಿಗೆ ಹರಕೆಯ ರೂಪದಲ್ಲಿ 111 ಟಗರುಗಳನ್ನು ಅರ್ಪಿಸಲಾಯಿತು. ಮಧ್ಯಾಹ್ನ 2 ಘಂಟೆಯಿಂದ ಸಂಜೆವರೆಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ. ಹುಚ್ಚೇಗೌಡ, ಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಬಿ.ಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.