ADVERTISEMENT

ರೈತರಿಗೆ ಕೃಷಿಭೂಮಿಯ ಅರಿವು ಅಗತ್ಯ: ಶಾಸಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:41 IST
Last Updated 27 ಡಿಸೆಂಬರ್ 2012, 7:41 IST

ಕೃಷ್ಣರಾಜಪೇಟೆ: ಕ್ಷೇತ್ರ ಪರಿಣಿತರು ನೀಡುವ ಸಲಹೆಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ತೊಡಗಿದಾಗ ರೈತರು ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದು ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಕೃಷಿ ಇಲಾಖೆ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ 2012ನೇ ಸಾಲಿನ ಕೃಷಿ ಮಾಹಿತಿ ಆಂದೋಲನದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬಹುತೇಕ ರೈತರಿಗೆ ಉತ್ತಮ ಪ್ರತಿಫಲ ಸಿಗುತ್ತಿಲ್ಲ. ಜಮೀನಿನ ಮಣ್ಣಿನಲ್ಲಿ, ತಾವು ನೆಲೆಸಿರುವ ಪ್ರದೇಶದ ಹವಾಗುಣದಲ್ಲಿ, ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ಅಗತ್ಯ ತಿಳುವಳಿಕೆ ಇರಬೇಕು. ಜೊತೆಗೆ ತಜ್ಞರ ಸಲಹೆ, ಮಾರ್ಗದರ್ಶನವನ್ನು ಅಳವಡಿಸಿಕೊಂಡು ಕೃಷಿ ಮಾಡುವುದು ಉತ್ತಮ. ನೀರಿನ ಮಿತ ಬಳಕೆ, ಹೆಚ್ಚು ಇಳುವರಿ ನೀಡುವ ತಳಿಗಳ ಬಳಕೆ, ಮಿಶ್ರಬೆಳೆ ಮತ್ತಿತರ ತಂತ್ರಗಳನ್ನು ರೈತರು ಅನುಸರಿಸಬೇಕೆಂದು ಸಲಹೆ ನೀಡಿದರು.

ಕೃಷಿ ಸಲಕರಣೆಗಳ ಹಾಗೂ ಉತ್ಪನ್ನಗಳ ವಸ್ತುಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜೇಗೌಡ, ಶೇ 1 ಬಡ್ಡಿ ದರದಲ್ಲಿ ಎಲ್ಲ  ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ದೊರೆಯುವಂತಾಗಬೇಕು. ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ಹತ್ತು ಸಾವಿರ ರೂಪಾಯಿ ಪರಿಹಾರ ನೀಡುವಂತಹ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.  ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಹಕಾರ ಮತ್ತಿತರ ಇಲಾಖೆಗಳು ಆಂದೋಲನದಲ್ಲಿ ಭಾಗವಹಿಸಿದ್ದವು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷೆ ಭುವನೇಶ್ವರಿ ಮೋಹನ್, ವಿರೋಧ ಪಕ್ಷದ ಮುಖಂಡ ಕೆ.ಆರ್.ರವೀಂದ್ರಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರ್ವಮಂಗಳ ವೆಂಕಟೇಶ್, ಗೌರಮ್ಮ ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ ಚನ್ನಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕಿಕ್ಕೇರಿಗೌಡ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.