ADVERTISEMENT

ಲಾಟರಿ ಪ್ರಕ್ರಿಯೆಗೆ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:00 IST
Last Updated 8 ಜೂನ್ 2011, 9:00 IST

ನಾಗಮಂಗಲ:  ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳಿಗೆ ಲಾಟರಿ ಪ್ರಕ್ರಿಯೆ ಮೂಲಕ ಅನುದಾನ ನೀಡುವ ಕಾರ್ಯಕ್ರಮವನ್ನು ತಾಲ್ಲೂಕು ಕೃಷಿ ಆಡಳಿತ ಮಂಗಳವಾರ ಪಟ್ಟಣದ ಟಿ.ಬಿ.ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿತ್ತು.

ಶಾಸಕ ಸುರೇಶ್‌ಗೌಡ  ಕಾರ್ಯಕ್ರಮ ಉದ್ಘಾಟಿಸಿದರು. ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಣ್ಣ ತಡವಾಗಿ ಬಂದ ಕಾರಣ ಮತ್ತೊಮ್ಮೆ ಕಾರ್ಯಕ್ರಮ ಉದ್ಘಾಟಿಸಿದ ನಿದರ್ಶನ ಅಂಬೇಡ್ಕರ್ ಭವನದಲ್ಲಿ ಕಂಡು ಬಂದಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸುರೇಶ್‌ಗೌಡ,  `ಸರ್ಕಾರ ಒಂದು ಉತ್ತಮ ಕಾರ್ಯಕ್ರಮ ಘೋಷಣೆ ಮಾಡಿದೆ. ಎರಡು ಕಂತುಗಳಲ್ಲಿ ರೈತರಿಗೆ ನೀಡುವ ಹಣ ವಲಸೆ ಹೋಗುತ್ತಿರುವ ರೈತರನ್ನು ಕೃಷಿ  ಕಾರ್ಯದಲ್ಲಿ ಉಳಿಯುವಂತೆ ಮಾಡಲು ಪ್ರೇರಣೆಯಾಗಿದೆ. ಅರ್ಹ ಫಲಾನುಭವಿಗಳು ಮಾತ್ರ ಈ ಯೋಜನೆಯ ಉಪಯೋಗ ಪಡೆಯಿರಿ. ಸುಳ್ಳು ದಾಖಲೆ ನೀಡಿ ನಕಲಿ ಫಲಾನುಭವಿಗಳು ಯೋಜನೆ ಬಳಸಿಕೊಂಡು ಅರ್ಹ ಫಲಾನುಭವಿಗಳಿಗೆ ಮೋಸ ಮಾಡ ಬೇಡಿ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಸಾಮಾನ್ಯ ಫಲಾನುಭವಿಗಳನ್ನು ಸೇರಿಸಿ ಒಟ್ಟು 2204 ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರೆಯುತ್ತದೆ. ಆದರೆ ಯೋಜನೆಯನ್ನು ಪಡೆಯಲು ಬಂದ ಅರ್ಜಿಗಳ ಸಂಖ್ಯೆ 10841. ಶೇ20 ಭಾಗ ಹೆಚ್ಚುವರಿ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆ ಮೂಲಕ ಆರಿಸಲಾಯಿತು.

ರೈತರ ಆಕ್ರೋಶ: ಲಾಟರಿ ಎತ್ತುವ ಮೂಲಕ ರೈತನಿಗೆ ಸರ್ಕಾರದ ಅನುದಾನವನ್ನು ಹಂಚುವುದು ಅವೈಜ್ಞಾನಿಕ ಪದ್ಧತಿಯಾಗಿದೆ ಹಾಗೂ ನಿಜವಾದ ಬಡ ರೈತ ಅನುದಾನವನ್ನು ಪಡೆಯುವಲ್ಲಿ ವಿಫಲನಾಗಿದ್ದಾನೆ ಎಂಬುದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವಾರು ರೈತರ ಒಕ್ಕೊರೊಲ ಅಭಿಪ್ರಾಯವಾಗಿತ್ತು.

ತಹಸೀಲ್ದಾರ್ ಎಂ.ಎಸ್.ಎನ್.ಬಾಬು, ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಡಾ.ಕೆ.ಮಾಲತಿ, ಜಿ.ಪಂ ಸದಸ್ಯ ಚಂದ್ರೇಗೌಡ, ತಾ.ಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಎಚ್.ಸಿ.ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ತಾಲ್ಲೂಕು ಬಿ.ಜೆ.ಪಿ ಘಟಕದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಮಾಜಿ ತಾ.ಪಂ ಸದಸ್ಯ ರಾಜೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.