ADVERTISEMENT

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲಹೆ.ರಾಜಕಾರಣಿಗಳನ್ನು ರಾಜರಂತೆ ಬಿಂಬಿಸಬೇಡಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 7:25 IST
Last Updated 8 ಮಾರ್ಚ್ 2011, 7:25 IST

ಮಂಡ್ಯ: ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಮಾಜದ ಎಲ್ಲರೂ ಕೈಜೋಡಿ ಸಬೇಕು. ಆಗ ಮಾತ್ರವೇ ಉದ್ದೇಶ ಈಡೇರುವುದು ಮಾತ್ರ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಅಭಿಪ್ರಾಯ ಪಟ್ಟರು.ಮದ್ದೂರು ತಾಲ್ಲೂಕು ಯಡಗನ ಹಳ್ಳಿಯಲ್ಲಿ ಸೋಮವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ, ಉಚಿತ ಆರೋಗ್ಯ ಶಿಬಿರ, ಡಾ. ಮೂರ್ತಿ ಅವರಿಗೆ ಸನ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡು ತ್ತಿದ್ದರು.

ಭ್ರಷ್ಟಚಾರ, ವ್ಯವಸ್ಥೆಯ ಲೋಪ ಕುರಿತು ಎಂದಿನಂತೆ ಚಾಟಿ ಬೀಸಿದ ಲೋಕಾಯುಕ್ತರು ರಾಜಕಾರಣಿಗಳ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು. ನಾನು ಭಾಗವಹಿಸುವ ವೇದಿಕೆ ಗಳಲ್ಲಿ ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.ಶಾಸಕರಾಗಲಿ, ಮಂತ್ರಿಗಳಾಗಲಿ ರಾಜಕಾರಣಿ ಗಳು ಆದಷ್ಟು ಸತ್ಯವನ್ನು ಹೇಳಬೇಕು. ಸುಮ್ಮನೆ ಸುಳ್ಳು ಭರವಸೆ ಗಳನ್ನು ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಮಾಡಬಾರದು. ಇಂಥ ವರ್ತನೆಗಳೇ ಅವ್ಯವಸ್ಥೆಗೆ ನಾಂದಿಯಾಗು ತ್ತವೆ ಎಂದರು.

ಸಾರ್ವಜನಿಕರು ಜನ ಪ್ರತಿನಿಧಿಗಳನ್ನು ರಾಜರಂತೆ ಬಿಂಬಿಸುತ್ತಾರೆ. ಆದರೆ, ರಾಜಕಾರಣಿಗಳು ಚುನಾವಣೆಯ ಬಳಿಕ ಜನರನ್ನು ಕೇವಲವಾಗಿ ಕಾಣುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕರ ಆಯ್ಕೆಗೆ ಆದಷ್ಟು ಜಾಗ್ರತೆ ವಹಿಸಬೇಕು ಎಂದು ಸಲಹೆ ಮಾಡಿದರು.ರಾಜಕಾರಣಿಗಳಿಗೆ ಜನಸೇವೆ ಮಾಡುವುದೇ ಉದ್ದೇಶವಾಗಿದ್ದರೆ ಅದಕ್ಕೆ ಹಣದ ಅಗತ್ಯವಿಲ್ಲ. ಬೇಕಾಗಿ ರುವುದು ಸೇವೆಯನ್ನು ಮಾಡುವ ಮನಸ್ಸು ಮಾತ್ರ.  ಇಂದು ಶಾಸಕ ರಾಗಲು 5 ಕೋಟಿ, ಸಂಸದರಾಗಲು 10 ಕೋಟಿ ವೆಚ್ಚ ಮಾಡಿದರೆ, ಅದು ಸೇವೆಯಾಗುವುದಿಲ್ಲ. ಬ್ಯುಸಿ ನೆಸ್ ಆಗಲಿದೆ ಎಂದು ವ್ಯಾಖ್ಯಾನಿಸಿದರು.

50ನೇ ವರ್ಷಾಚರಣೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, 25ನೇ ವರ್ಷ ಆಚರಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ವಿನಾಯಕ ವಿದ್ಯಾಸಂಸ್ಥೆಯ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಂಸದ ಅಂಬರೀಶ್, ಮಾಜಿ ಸಚಿವ ಬಿ.ಸೋಮಶೇಖರ್, ವಿಧಾನಪರಿಷತ್ತಿನ ಸದಸ್ಯ ರಾಮ ಕೃಷ್ಣ, ಮಾಜಿ ಶಾಸಕ ಮಧು ಮಾದೇಗೌಡ,  ಸ್ಥಳಿಯ ಮುಖಂಡ ಎಂ.ವೀರೇ ಗೌಡ, ಕೆ.ನಂಜುಂಡೇ ಗೌಡ, ಚನ್ನಬಸವೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT