ADVERTISEMENT

ವಿಜ್ಞಾನ ಶಿಕ್ಷಕರ ಹರಿಕಥೆ ಸಾರ...

ಶ್ಯಾಮೇಶ್ ಅತ್ತಿಗುಪ್ಪೆ
Published 11 ಸೆಪ್ಟೆಂಬರ್ 2011, 4:35 IST
Last Updated 11 ಸೆಪ್ಟೆಂಬರ್ 2011, 4:35 IST

ಕೃಷ್ಣರಾಜಪೇಟೆ: ಎತ್ತಣ ಮಾಮರ, ಎತ್ತಣ ಕೋಗಿಲೆ ಎಂಬ ಮಾತಿನಂತೆ ವೃತ್ತಿಯಿಂದ ವಿಜ್ಞಾನ ಶಿಕ್ಷಕರೊಬ್ಬರು, ಪ್ರವೃತ್ತಿಯಿಂದ ಹರಿಕಥೆ ವಿದ್ವಾಂಸರೂ ಆಗಿರುವ ನಿದರ್ಶನ ಇದು. ಅಲ್ಲದೆ ತಮ್ಮ ಕಾಲುಗಳ ಊನತೆಯ ನಡುವೆಯೂ ಇವರು ಹೆಚ್ಚಿನದ್ದನ್ನು ಸಾಧಿಸುವುದು ಸಾಧ್ಯ ಎಂದು ನಿರೂಪಿಸಿ ತೋರಿಸಿದ್ದಾರೆ.

ತಾಲ್ಲೂಕಿನ ಹೊಸಹೊಳಲು ಗ್ರಾಮದ ಎಚ್.ವೈ.ವಿಠಲ್‌ದಾಸ್ ಚಿಕ್ಕಂದಿನಲ್ಲಿ ಪೋಲಿಯೋ ಪೀಡಿತರಾಗಿ ಕಾಲುಗಳ ಆಕಾರ ಕಳೆದುಕೊಂಡವರು. ಆದರೂ ಧೃತಿಗೆಡದೆ ಚೆನ್ನಾಗಿ ಓದಿ ಶಿಕ್ಷಕ ವೃತ್ತಿ ಗಳಿಸಿಕೊಂಡವರು. ಚಿಕ್ಕಂದಿನಿಂದ ನಾಟಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದವರು.

ಇಂದು ನಿರರ್ಗಳವಾಗಿ ಹರಿಕಥಾ ಪ್ರದರ್ಶನಗಳನ್ನು ನೀಡುತ್ತಾ ಎಲ್ಲರೂ ತಮ್ಮ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.  ಹಿರಿಯ ಯಕ್ಷಗಾನ ಕಲಾವಿದ ಯಮ್ಮಣ್ಣಶೆಟ್ಟಿ ಮತ್ತು ಕಲ್ಯಾಣಮ್ಮ ದಂಪತಿಯ ಪುತ್ರನಾದ ಇವರು ಪ್ರಸ್ತುತ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಕರು.
ಅಂಗ ವಿಕಲತೆಯನ್ನು ಲೆಕ್ಕಿಸದೆ ಕೈಹಿಡಿದ ಪತ್ನಿ ಪುಟ್ಟಲಕ್ಷ್ಮಿ, ಎಂಜಿನೀಯರಿಂಗ್ ಪದವೀಧರ ಪುತ್ರ , ಪುತ್ರಿಯಿರುವ ಚಿಕ್ಕ ಕುಟುಂಬ ಇವರದ್ದು. ತಮ್ಮ ವೈಕಲ್ಯವನ್ನು ಮರೆತು ಎಲ್ಲರಂತೆ ಮುಖ್ಯ ವಾಹಿನಿಯಲ್ಲಿ ತೊಡಗಿಕೊಳ್ಳಲು ಹಿತೈಷಿಗಳ ಸಲಹೆಯಂತೆ ಹರಿಕಥೆ ತಂಡವನ್ನು ಕಟ್ಟಿಕೊಂಡರು. ವಿಕಲತೆ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆ ಸುತ್ತಾಡುತ್ತಾ ಹರಿಕಥೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ರಾಮಾಯಣ ಮತ್ತು ಮಹಾಭಾರತ ಆಧರಿಸಿದ ಕಥೆಗಳು, ಶನಿಮಹಾತ್ಮೆ, ಭೂಕೈಲಾಸ, ಸತ್ಯ ಹರಿಶ್ಚಂದ್ರ, ಭಕ್ತ ಮಾರ್ಕಂಡೇಯ, ನಳ ದಮಯಂತಿ, ಸ್ಥಳೀಯ ಪುರಾಣಗಳು ಇವರಿಗೆ ಕರತಲಾಮಲಕ.

ಇದುವರೆಗೂ ಸಾವಿರಕ್ಕೂ ಹೆಚ್ಚು ಹರಿಕಥೆ ಕಾರ್ಯಕ್ರಮಗಳನ್ನು ನೀಡಿರುವ ಕೀರ್ತಿ ಇವರ ಮುಡಿಗೇರಿದೆ.
ಜೊತೆಗೆ ನಾಟಕಾಭಿನಯ ಮತ್ತು ಹಾಡುಗಾ ರಿಕೆಯಲ್ಲೂ ಇವರದ್ದು ಎತ್ತಿದ ಕೈ !  ಇಷ್ಟೆಲ್ಲಾ ಸಾಧನೆ ಇದ್ದರೈ ಜಿಲ್ಲಾ ಡಳಿತ ಅಥವಾ ಸಂಘ ಸಂಸ್ಥೆಗಳಾಗಲಿ ಇವರನ್ನು ಗುರು ತಿಸದೇ ಇರುವುದು ದುರದೃಷ್ಟಕರ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.