ADVERTISEMENT

`ವಿದ್ಯುತ್ ಕೇಂದ್ರ ಸ್ಥಾಪನೆಗೆ ಒತ್ತು'

ಪ್ರಜಾವಾಣಿ ವಿಶೇಷ
Published 26 ಏಪ್ರಿಲ್ 2013, 6:44 IST
Last Updated 26 ಏಪ್ರಿಲ್ 2013, 6:44 IST

ಮಂಡ್ಯ: ಸರಳ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡವರು ಮಾಜಿ ಸ್ಪೀಕರ್ ಕೃಷ್ಣ. ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಚುನಾವಣೆ ಪ್ರಚಾರ ಹೇಗಿದೆ?
ಜನರೇ ದೇಣಿಗೆ ನೀಡಿ ಪ್ರಚಾರಕ್ಕೆ ಸಹಕರಿಸುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಜೆಪಿಯವರೂ ಬೆಂಬಲಕ್ಕೆ ನಿಂತಿದ್ದಾರೆ. ಚುನಾವಣೆ ಲೆಕ್ಕಾಚಾರದಲ್ಲಿ ಜಾತಿ ಲೆಕ್ಕಾಚಾರ ನುಸುಳಿದೆ.

ಕಳೆದ ಚುನಾವಣೆಗಿಂತ ಈ ಚುನಾವಣೆಗೆ ಹೇಗೆ ಭಿನ್ನವಾಗಿದೆ?
ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ಹೊಸ ಗುರುತು ಸಿಕ್ಕಿರುವುದು ಅಂಥ ತೊಡಕೇನು ಆಗಿಲ್ಲ. ಪರಿಚಯಿಸುವ ಕೆಲಸ ನಡೆದಿದೆ. ಮತದಾರರು ಗೃತರಾಗಿರುವುದರಿಂದ ನೋಡುಕೊಂಡು ಮತ ಹಾಕುತ್ತಾರೆ.

2004, 08 ಚುನಾವಣೆಯಲ್ಲಿಯೂ ಕೊನೆ ಚುನಾವಣೆ ಎಂದು ಹೇಳಿದ್ದೀರಿ?
ನಿಜ. 2004ರ ಚುನಾವಣೆ ನಂತರ ಸ್ಪರ್ಧಿಸಬಾರದು ಎಂದುಕೊಂಡಿದ್ದೆ. 2008ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೆ. ಈಗ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ನಿಂತಿದ್ದೇನೆ. ಇದು ನನ್ನ ಕೊನೆ ಚುನಾವಣೆ. ಮುಂದೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ.

ನಿಮಗೆ ಯಾಕೆ ಮತ ಹಾಕಬೇಕು?
ಪ್ರಾಮಾಣಿಕವಾಗಿ 30 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ಧಿ ಮಾಡಿದ್ದೇನೆ. ನಿಷ್ಠೆಯನ್ನು ಗುರುತಿಸಿರಿ. ನಾನು ಶಾಸಕನಾಗಿದ್ದ ಕಾಲದಲ್ಲಿ ಆರಂಭವಾಗಿ ಅರ್ಧಕ್ಕೆ ನಿಂತಿರುವ ಪೂರ್ಣಗೊಳಿಸಬೇಕಿದೆ.

ನಿಮ್ಮ ಭರವಸೆಗಳೇನು?
ಕೈಗಾರಿಕ ಸಮುಚ್ಛಯ ಸ್ಥಾಪನೆಗೆ ಮುಂದಾಗಬೇಕಿದೆ. ಇದರಿಂದ ಉದ್ಯೋಗಾವಕಾಶ ಮತ್ತು ಆರ್ಥಿಕ ಸುಧಾರಣೆ ಆಗುತ್ತದೆ. ಹೇಮಾವತಿ ಯೋಜನೆಯಡಿ 44 ಎಕರೆ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ನೀರು ಹರಿಯುತ್ತಿಲ್ಲ. ನೀರು ಹರಿಸುವ ಕೆಲಸ ಆಗಬೇಕಿದೆ. ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.