ADVERTISEMENT

ವಿವಿಧ ದೇಗುಲಗಳಿಗೆ ಬಿಎಸ್‌ವೈ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:31 IST
Last Updated 15 ಡಿಸೆಂಬರ್ 2012, 9:31 IST

ಕೃಷ್ಣರಾಜಪೇಟೆ: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ರಾತ್ರಿ ತಮ್ಮ ಹುಟ್ಟೂರು ತಾಲ್ಲೂಕಿನ ಬೂಕನಕೆರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಪ್ರತಿ ವರ್ಷ ಕಾರ್ತಿಕ ಅಮಾವಾಸ್ಯೆಯಂದು ಬೂಕನಕೆರೆಗೆ ಆಗಮಿಸಿ ತಮ್ಮ ಮನೆದೇವರು ಅಕ್ಕಯ್ಯಮ್ಮನ ಪೂಜೆಯಲ್ಲಿ ಪಾಲ್ಗೊಳ್ಳುವುದು ಯಡಿಯೂರಪ್ಪನವರ ಅಭ್ಯಾಸ.

ಅಂತೆಯೇ ಈ ವರ್ಷವೂ ಕಾರ್ತಿಕ ಮಾಸದ ಅಮಾವಾಸ್ಯೆ ದಿನವಾದ ಶುಕ್ರವಾರ ಬೂಕನಕೆರೆಗೆ ಭೇಟಿ ನೀಡಿದ್ದರು. ಮನೆದೇವರು ಅಕ್ಕಯ್ಯಮ್ಮ, ಗ್ರಾಮದೇವತೆ  ಗೋಗಲ್ಲಮ್ಮ ದೇವತೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಸಮೀಪದ ವರಹನಾಥ ಕಲ್ಲಹಳ್ಳಿಯ ಪ್ರಖ್ಯಾತ ಭೂ ವರಹನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ನಂತರ ತಮ್ಮ ಇಷ್ಟದೇವತೆ ದಕ್ಷಿಣ ಕಾಶಿ ಖ್ಯಾತಿಯ ಕಾಪನಹಳ್ಳಿ ಗವಿಮಠದ ಪವಾಡ ಪುರುಷ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಯಲ್ಲೂ ಪೂಜೆ ಸಲ್ಲಿಸಿ, ಶ್ರೀಕ್ಷೇತ್ರದ ಸ್ವತಂತ್ರ ಬಸವಲಿಂಗ ಶಿವಯೋಗಿಗಳ ಆಶೀರ್ವಚನ ಪಡೆದರು. ಗವಿಮಠದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವದಲ್ಲಿಯೂ ಅವರು ಪಾಲ್ಗೊಂಡಿದ್ದರು.  ಬೂಕನಕೆರೆಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಸಿ.ಅಶೋಕ್, ಕೆಜೆಪಿ ಮುಖಂಡರಾದ ವಿ.ಧನಂಜಯಕುಮಾರ್, ಸಿಂಧಘಟ್ಟ ಅರವಿಂದ್, ಜವರಾಯಿಗೌಡ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.