ಶ್ರೀರಂಗಪಟ್ಟಣ: ವಿಷಾಹಾರ ಸೇವನೆಯಿಂದ ಮಹಿಳೆಯೊಬ್ಬರು ಮೃತಟ್ಟು 6 ಮಂದಿ ಅಸ್ವಸ್ಥಗೊಂಡಿರುವ ಪ್ರಕರಣ ತಾಲ್ಲೂಕಿನ ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಂಗಾಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಬನ್ನಂಗಾಡಿ ಗ್ರಾಮದ ಕಳಸೇಗೌಡ ಎಂಬವರ ಪತ್ನಿ ಜಯಮ್ಮ (60) ಮೃತಪಟ್ಟಿದ್ದು, ಕಳಸೇಗೌಡ, ಮಗ ಯೋಗೀಶ್, ಪುತ್ರಿ ಕಳಸಮ್ಮ, ಸೊಸೆ ಕಾವ್ಯ, ಮೊಮ್ಮಕ್ಕಳಾದ ಶಿಲ್ಪ ಹಾಗೂ ಪ್ರಕೃತಿ ಅಸ್ವಸ್ಥಗೊಂಡಿದ್ದಾರೆ. ಜಯಮ್ಮ ಅವರನ್ನು ಬನ್ನಂಗಾಡಿ ಗ್ರಾಮದಿಂದ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಸ್ವಸ್ಥರಿಗೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಹರೀಶ್ಕುಮಾರ್ ತಿಳಿಸಿದ್ದಾರೆ.
ಬುಧವಾರ ರಾತ್ರಿ ರಾಗಿಮುದ್ದೆ, ಅನ್ನ, ಸಾರು ತಿಂದು ಮಲಗಿದ ಕಳಸೇಗೌಡ ಇತರರು ತಡರಾತ್ರಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡಿದ ಒಂದು ಗಂಟೆಯ ನಂತರ ವಾಂತಿ, ಭೇದಿ ಶುರುವಾಗಿದೆ. ಕಲುಷಿತ ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ: ಯುವಕ ಸಾವು
ಮದ್ದೂರು: ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಕೊಪ್ಪ ಬಳಿಯ ಕಾನಿಹಳ್ಳದ ಬಳಿ ನಡೆದಿದೆ.
ಬೆಂಗಳೂರು ಮೂಲದ ಸುರೇಶ್ (23) ಮೃತ ಬೈಕ್ ಸವಾರ. ಈತನೊಂದಿಗೆ ಇದ್ದ ಶ್ರೀನಿವಾಸ್ ಅವರಿಗೆ ತೀವ್ರಗಾಯಗಳಾಗಿದ್ದು, ಇವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದೆ.
ಕೊಪ್ಪ ಸಂಬಂಧಿಕರ ಮನೆಗೆ ಬಂದಿದ್ದ ಈತ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಮಧ್ಯಾಹ್ನ 3ಗಂಟೆ ಸಮಯದಲ್ಲಿ ಮರ ತುಂಬಿದ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಜರುಗಿದೆ.
ಕೊಪ್ಪ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.