ಮಂಡ್ಯ: ಮಡೆ ಮಡೆಸ್ನಾನ, ಬೆತ್ತಲೆ ಸೇವೆಯಂತಹ ಮೌಢ್ಯಗಳಿಂದ ದೂರವಿರಬೇಕು. ಪ್ರಜಾಪ್ರಭುತ್ವ ಉಳಿಯಬೇಕಾದರೆ, ವೈಜ್ಞಾನಿಕ ಚಿಂತನೆಗಳನ್ನು ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್. ಚಂದ್ರಶೇಖರ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಗಾಂಧಿಭವನದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ಮೂಢನಂಬಿಕೆ ಪ್ರತಿಬಂಧಕ ನಿಷೇಧ ಕಾಯ್ದೆ ಜಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
-ದುರ್ಬಲ ಮನಸ್ಸಿನವರು, ಬಲಹೀನರು ಮೌಢ್ಯತೆಯ ಆಚರಿಸುತ್ತಾರೆ. ಬಲಾಢ್ಯರು ಮೌಢ್ಯವನ್ನು ನಿರಾಕರಿಸಿ ತಮ್ಮ ಮನಸ್ಸಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಾರೆ. ಮೂಢನಂಬಿಕೆ ಅಸಮಾನತೆಯನ್ನು ಸೃಷ್ಠಿಸುತ್ತದೆ ಎಂದರು.
ಪ್ರಗತಿಪರ ಚಿಂತಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅದಿವೇಶನದಲ್ಲೇ ಈ ವಿಧೇಯಕ ಜಾರಿಗೆ ತರುತ್ತಾರೆ ಎಂದು ನಂಬಿದ್ದೆವು. ಅದು ಹುಸಿಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಶೇ 90ರಷ್ಟು ಮಹಿಳೆಯರು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ಜ್ಯೋತಿಷ, ಮೈಮೇಲೆ ದೇವರು, ದೆವ್ವ ಬರುವುದು, ಅಳುವ ಮಕ್ಕಳಿಗೆ ದೃಷ್ಟಿ ತೆಗೆಯುವ ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಾರೆ. ಅವರು ವೈಜ್ಞಾನಿಕ ಅರಿವು ಪಡೆದುಕೊಳ್ಳುವುದು ಅತ್ಯಗತ್ಯ. ಒಳ್ಳೆಯದ್ದು, -ಕೆಟ್ಟದ್ದು ಯಾವುದು ಎಂಬ ವಿಮರ್ಶಾ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಸಂಘಟನೆಯ ರಾಜ್ಯ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮೂಢನಂಬಿಕೆ ದುರ್ಬಲರನ್ನು ಶೋಷಣೆ ಮಾಡುವ ಪ್ರಬಲ ಅಸ್ತ್ರವಾಗಿದೆ. ಶೋಷಕರು ಇದನ್ನು ಪೋಷಿಸಿಕೊಂಡು ನಮ್ಮ ಅಜ್ಞಾನದ ಮೇಲೆ ಸವಾರಿ ಮಾಡಲು ಯತ್ನಿಸುತ್ತಾರೆ. ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ ಕಂಠಿ, ಜಿ.ಪಂ.ಉಪಕಾರ್ಯದಶರರ್ಶಿ ಎಸ್.ಸಿ. ಮಹೇಶ್, ರಾಜ್ಯ ಸಂಚಾಲಕ ಬ್ಯಾಡರಹಳ್ಳಿ ಪ್ರಕಾಶ್, ಶಿವು ಗೊಬ್ಬರಗಾಲ, ಎಂ.ಎಚ್. ಗೀತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.