ಮದ್ದೂರು: ವೈದ್ಯನಾಥಪುರದಲ್ಲಿ ಮಂಗಳವಾರ ವೈದ್ಯನಾಥೇಶ್ವರ ರಥೋತ್ಸವವು ನೂರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಹರಕೆ ಸಲ್ಲಿಸಿದರು.
ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಸನ್ನ ಪಾರ್ವತಾಂಭ ಹಾಗೂ ವೈದ್ಯನಾಥೇಶ್ವರಸ್ವಾಮಿಯ ಉತ್ಸವ ಸಂಭ್ರಮದಿಂದ ಜರುಗಿತು.
ಮಧ್ಯಾಹ್ನ ದೂರದ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸನ್ನ ಪಾರ್ವತಾಂಬ ಟ್ರಸ್ಟ್ ವತಿಯಿಂದ ಉಚಿತವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಹಳೇ ಬೂದನೂರಿನ ಅಂಕನಾಥೇಶ್ವರ, ನಗರಕೆರೆ ಪಟಲಾಂಭದೇವಿ, ಮದ್ದೂರಿನ ಮದ್ದೂರಮ್ಮ, ಆಲೂರಿನ ಆಲೂರಮ್ಮ ದೇವತೆಗಳ ಪೂಜಾ ಪಟಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವರು. ಗ್ರಾಮದ ಜನರು ತಮ್ಮ ಮನೆಗಳ ಬಳಿ ಉತ್ಸವಕ್ಕೆ ತಮ್ಮ ಹರಕೆ ಅಭಿಷ್ಟೆ ಸಲ್ಲಿಸಿದರು. ಪ್ರಸನ್ನ ಪಾರ್ವತಾಂಬ ಟ್ರಸ್ಟ್ನ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
`ಸ್ತ್ರೀಶಕ್ತಿ ಭವನಕ್ಕೆ ಅನುದಾನ~
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸ್ತ್ರೀಶಕ್ತಿ ಭವನಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಬದ್ಧ ಎಂದು ಶಾಸಕಿ ಕಲ್ಪನ ಸಿದ್ದರಾಜು ಮಂಗಳವಾರ ಭರವಸೆ ನೀಡಿದರು.
ಪಟ್ಟಣದಲ್ಲಿ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಚಿವ ಎಸ್.ಎಂ.ಕೃಷ್ಣ, ಸಂಸದ ಚೆಲುವರಾಯಸ್ವಾಮಿ, ಮೇಲ್ಮನೆ ಸದಸ್ಯ ಬಿ.ರಾಮಕೃಷ್ಣ ಅವರು ಸ್ತ್ರೀ ಶಕ್ತಿ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರ ಭವನ ಪೂರ್ಣಗೊಳ್ಳಲು ಒಕ್ಕೂಟ ಮುಂದಾಗಬೇಕು ಎಂದು ಕರೆ ನೀಡಿದರು. ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿಚನ್ನರಾಜು, ಕಾರ್ಯದರ್ಶಿ ಸುರೇಶ್, ಖಜಾಂಚಿ ರೇಣುಕಾ ಶ್ರೀನಿವಾಸ್, ರಾಧ, ಪದ್ಮ, ಶೋಭ, ಮರಿದೇವರು, ಜಯಲಕ್ಷ್ಮಮ್ಮ, ಪ್ರೇಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.