ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ. ಶೆಟ್ಟಹಳ್ಳಿ ಎರಡನೇ ವೃತ್ತದ ನಾಡಕಚೇರಿಯ ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ಆದಾಯ, ಜಾತಿ, ವಾಸಸ್ಥಳ ಇತರ ಪ್ರಮಾಣ ಪತ್ರಗಳು ಸಕಾಲಕ್ಕೆ ಸಿಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಜನರು ಸೋಮವಾರ ನಾಡಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಅಟಲ್ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗದುಕೊಂಡರು. ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು. ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿ 20 ದಿನಗಳಾದರೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಅರ್ಜಿ ಪಡೆದದ್ದಕ್ಕೆ ಹಿಂಬರಹ ಕೊಡುತ್ತಿಲ್ಲ. ಇಲ್ಲಿನ ಸಿಬ್ಬಂದಿ ಸರ್ವರ್ ಸಮಸ್ಯೆಯ ಕಾರಣ ಮುಂದಿಡುತ್ತಿದ್ದಾರೆ. ಕಳೆದ 6 ತಿಂಗಳುಗಳಿಂದ ಈ ಸಮಸ್ಯೆ ಇದ್ದರೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿಲ್ಲ ಎಂದು ಗೋವಿಂದು, ಗ್ರಾಮ ಪಂಚಾಯಿತಿ ಸದಸ್ಯೆ ಶಾರದಮ್ಮ, ಚಿನ್ನೇನಹಳ್ಳಿ ರವಿ, ಗೌಡಹಳ್ಳಿ ಪ್ರಸನ್ನ ಇತರರು ದೂರಿದರು.
ಅಟಲ್ಜೀ ಜನಸ್ನೇಹಿ ಕೇಂದ್ರದ ದಿವ್ಯಾ ಮಾತನಾಡಿ, ಕೆ.ಶೆಟ್ಟಹಳ್ಳಿ 2ನೇ ವೃತ್ತದ ನಾಡಕಚೇರಿಗೆ ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ. ಖಾಸಗಿ ಕಂಪೆನಿಗಳ ಇಂಟರ್ನೆಟ್ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲ. ದಿನ ಒಂದಕ್ಕೆ 60ಕ್ಕೂ ಹೆಚ್ಚು ಅರ್ಜಿಗಳು ಬರುತ್ತಿದ್ದು, ವಿಲೇವಾರಿ ಮಾಡುವುದು ಕಷ್ಟವಾಗಿದೆ ಎಂದು ಸಮಸ್ಯೆ ತೋಡಿಕೊಂಡರು.
ಸರ್ವರ್ ಸಮಸ್ಯೆ ಇರುವುದರಿಂದ ಬೇರೆ ಕೇಂದ್ರದಲ್ಲಿ ಜನರಿಗೆ ಅಗತ್ಯವಾದ ಪ್ರಮಾಣ ಪತ್ರ ಸಿದ್ದಪಡಿಸಿ ಕೊಡುತ್ತಿದ್ದೇವೆ ಎಂದು ಕಂದಾಯ ನಿರೀಕ್ಷಕ ಅನಂತಪದ್ಮನಾಭ ತಿಳಿಸಿದರು. ಸಂಬಂಧಿಸಿದವರ ಜತೆ ಚರ್ಚಿಸಿ ಕೆ. ಶೆಟ್ಟಹಳ್ಳಿ 2ನೇ ವೃತ್ತದ ಅಟಲ್ಜೀ ಜನಸ್ನೇಹಿ ಕೇಂದ್ರದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.