ಮಳವಳ್ಳಿ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕಳೆದ ಎರಡು ವರ್ಷಗಳ ಹಿಂದೆ ಮುಚ್ಚಿ ಹೋಗಿದ್ದ ಶಿಂಷಾಪುರದ ಸರ್ಕಾರಿ ಪ್ರಾಥಮಿಕ ಶಾಲೆ ಬುಧವಾರ ಮತ್ತೆ ಆರಂಭಗೊಂಡಿತು.
ಗ್ರಾಮದ ಮದರಸಾ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾದ ಕಾರಣ ಸರ್ಕಾರಿ ಶಾಲೆಗೆ ಮರುಜೀವ ನೀಡಿದಂತಾಯಿತು.
ಮುಚ್ಚಿ ಹೋಗಿದ್ದ ಕನ್ನಡ ಶಾಲೆಯ ಪುನಾರಂಭಕ್ಕಾಗಿ ಮುಸ್ಲಿಂ ಮುಖಂಡ ಅಬ್ದುಲ್ ಖಾದರ್ ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಸರ್ಕಾರಿ ಶಾಲೆಯ ಉಳಿವಿಗಾಗಿ ಮದರಸಾ ಮಕ್ಕಳನ್ನು ಸರ್ಕಾರಿ ದಾಖಲು ಮಾಡಿದರು. ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಚಂದ್ರಪಾಟೀಲ್ ಹಾಗೂ ಇತರರು ಭೇಟಿ ನೀಡಿ ಶಾಲೆಯ ಆವರಣ ಸ್ವಚ್ಛಗೊಳಿಸಿ
ಶಾಲೆ ಪುನಾರಂಭಗೊಳಿಸಿದರು. ಶಾಲೆಯಲ್ಲಿ ಸದ್ಯ 16 ಮುಸ್ಲಿಂ ಮಕ್ಕಳು ಹಾಗೂ 6 ಹಿಂದೂ ಮಕ್ಕಳು ಇದ್ದಾರೆ.
‘ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆ ಮುಚ್ಚಿ ಹೋಗಿತ್ತು. ಅಬ್ದುಲ್ ಖಾದರ್ ಅವರ ಮನವಿಯ ಮೇರೆಗೆ ಈ ಶಾಲೆ ಪುನಾರಂಭಗೊಂಡಿದೆ. ಇದೇ ರೀತಿ ತಾಲ್ಲೂಕಿನ ವಿವಿಧೆಡೆ ದಾಖಲಾತಿ ಕೊರತೆಯಿಂದ ಮುಚ್ಚಿರುವ ಶಾಲೆಗಳಿಗೆ ಮಕ್ಕಳು ದಾಖಲಾದರೆ ಶಾಲೆಗಳನ್ನು ಮತ್ತೆ ಆರಂಭಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್ ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ನಾಗೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಯ್ಯ, ಶಿವಶಂಕರ್, ರಘು, ರವಿ, ಶಿವಪ್ರಕಾಶ್, ಅಬ್ದುಲ್ ಖಾದರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.