ADVERTISEMENT

ಸಹಾಯಧನ ವಾಪಸ್‌ಗೆ ನೋಟಿಸ್: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:35 IST
Last Updated 8 ಜನವರಿ 2011, 8:35 IST

ಮೇಲುಕೋಟೆ: ಆಶ್ರಯಮನೆ ಸಹಾಯಧನ ವಾಪಸ್ ನೀಡುವಂತೆ ನೋಟಿಸ್ ನೀಡಿದ್ದ ಪಾಂಡವಪುರ ಪಟ್ಟಣ ಪಂಚಾಯಿತಿ ವಿರುದ್ಧ ಫಲಾನುಭವಿಗಳು ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಹಳೆ ಪಾಂಡವಪುರದ ಹಳೆ ಅಂಚೆಕಚೇರಿ ಬಳಿ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಫಲಾನುಭವಿಗಳು ಮಿನಿವಿಧಾನಸೌಧಕ್ಕೆ ಮುತ್ತಿಗೆಹಾಕಿ ಪ.ಪಂ  ನೀಡಿರುವ ನೋಟೀಸನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

 ಜಯಂತಿ ನಗರ, ಶಾಂತಿನಗರ, ಚಂದ್ರಬಡಾವಣೆ, ಮಹಾತ್ಮ ಗಾಂಧೀನಗರ...  ಬಡಾವಣೆಗಳಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು 12ವರ್ಷ ಹಿಂದೆ ಪಟ್ಟಣ ಪಂಚಾಯಿತಿ 25 ಸಾವಿರ ರೂ ಸಹಾಯಧನ ಮಂಜೂರು ಮಾಡಿತ್ತು. ಈಗ ಸಹಾಯಧನವನ್ನು ಸಾಲವನ್ನಾಗಿ ಪರಿವರ್ತಿಸಿ ಬಡ್ಡಿಯೊಂದಿಗೆ ವಾಪಸ್ ನೀಡಬೇಕು ಎಂದು ಪ.ಪಂ ಅಧಿಕಾರಿಗಳು ಫಲಾನುಭವಿಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.  

  ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ ಬಂಡವಾಳಶಾಹಿಗಳಿಗೆ ಸೌಲಭ್ಯ ಒದಗಿಸುವ ಸರ್ಕಾರ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ನೀಡುತ್ತಿದೆ. ಸಹಾಯಧನವನು  ಸಾಲವಾಗಿ ಪರಿವರ್ತಿಸಿ ಬಡ್ಡಿ ಸಮೇತ ಪಾವತಿಸಿ ಎಂದು ನೋಟಿಸ್ ನೀಡಿರುವುದು ಅಮಾನವೀಯ. ನೋಟೀಸ್ ಹಿಂಪಡೆದು ಸಹಾಯಧನ ವಸೂಲಾತಿ ಕೈಬಿಡಬೇಕು ಇಲ್ಲದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಜಿಪಂ ಸದಸ್ಯ ಕೆ.ಕೆಂಪೂಗೌಡ, ದಯಾನಂದ, ಹೊಸಕೋಟೆ ವಿಜಯಕುಮಾರ್ ಇತರರು ಇದ್ದರು. ತಹಶೀಲ್ದಾರ್ ಶಿವಾನಂದಮೂರ್ತಿ, ಪ.ಪಂ ಮುಖ್ಯಾಧಿಕಾರಿ ನಾಗರಾಜು ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.