ADVERTISEMENT

ಹಕ್ಕಿಪಿಕ್ಕಿ ಜನರಿಗೂ ಸಿಕ್ತು ಮತದಾರರ ಗುರುತಿನ ಚೀಟಿ

14ರವರೆಗೆ ಹೆಸರು ಸೇರ್ಪಡೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 10:40 IST
Last Updated 9 ಏಪ್ರಿಲ್ 2018, 10:40 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಚನ್ನಹಳ್ಳಿ ಬಳಿ ನೆಲೆ ನಿಂತಿರುವ 150 ಮಂದಿ ಹಕ್ಕಿಪಿಕ್ಕಿ ಜನರಿಗೆ ಭಾನುವಾರ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು. ತಹಶೀಲ್ದಾರ್‌ ಡಿ. ನಾಗೇಶ್‌ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದರು.

‘ಅರ್ಹತೆ ಇರುವ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಲೆಮಾರಿ ಜನರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಗುತ್ತಿದೆ. 6 ತಿಂಗಳುಗಳಿಂದ ಒಂದೇ ಕಡೆ ನೆಲೆ ನಿಂತಿದ್ದ ಕಾರಣ ಈ ಜನರಿಗೆ ಮತದಾರರ ಗುರುತಿನ ಚೀಟಿ ನೀಡಿದ್ದು, ಇದನ್ನು ಪಡಿತರ ಚೀಟಿ ಮತ್ತು ಆಧಾರ್‌ ಚೀಟಿಗಳನ್ನೂ ವಿತರಿಸಲಾಗುವುದು’ ಎಂದು ಅವರು ಹೇಳಿದರು.

‘ಏ.14ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಡಲು ಅವಕಾಶ ಇದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಬೂತ್‌ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಬೇಕು. ದಾಖಲೆ ಇಲ್ಲದೆ ₹50 ಸಾವಿರಕ್ಕಿಂತ ಹೆಚ್ಚು ಹಣವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯುವಂತಿಲ್ಲ ಎಂಬ ನಿಯಮ ಇದ್ದು, ಅದನ್ನು ಎಲ್ಲರೂ ಪಾಲಿಸಬೇಕು’ ಎಂದು ಚುನಾವಣಾ ಶಿರಸ್ತೇದಾರ್‌ ಭರತ್‌ ತಿಳಿಸಿದರು.

ADVERTISEMENT

‘ನಮ್ಮಲ್ಲಿ ಬಹುತೇಕ ಜನರು ಇದುವರೆಗೆ ವೋಟ್‌ ಹಾಕಿಲ್ಲ. 18 ವರ್ಷ ತುಂಬಿರುವ ಎಲ್ಲರಿಗೂ ಈಗ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ನಮಗೂ ವೋಟು ಹಾಕುವ ಅವಕಾಶ ಸಿಕ್ಕಿರುವುದು ಸಂತಸ ಉಂಟು ಮಾಡಿದೆ’ ಎಂದು ಹಕ್ಕಿಪಿಕ್ಕಿ ಜನಾಂಗದ ಮುಖಂಡ ರೈಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.