ADVERTISEMENT

ಹಳ್ಳಿಹೈದ ಈಗ ಸ್ಪರ್ಧಾತಜ್ಞ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 5:50 IST
Last Updated 22 ಜುಲೈ 2012, 5:50 IST

ಶ್ರೀರಂಗಪಟ್ಟಣ: ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ಓದಿದಾತ ಈಗ ಗುರುತಿಸುವಂತಹ ಸ್ಪರ್ಧಾತಜ್ಞನಾಗಿ ಬೆಳೆದಿರುವ ಪರಿ ಅಚ್ಚರಿ ಮೂಡಿಸುತ್ತದೆ.

ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸುಧಾಕರ್ ಎಂಬವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಾಮಕಾರಿ ತರಬೇತಿ ನೀಡುವುದರಲ್ಲಿ ಸಿದ್ಧ ಹಸ್ತರಾಗಿ ಬೆಳೆದಿದ್ದಾರೆ. ಮೈಸೂರಿನ ಬಸುದೇವ ಸೋಮಾನಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಇವರು ಪ್ರಸಿದ್ಧ `ದಿಕ್ಸೂಚಿ~ ಮಾಸ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್, ಶಿಕ್ಷಕ, ಎಫ್‌ಡಿಎ, ಎಸ್‌ಡಿಎ, ಪಿಡಿಓ ಇತರ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ `ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಸಿದ್ಧತೆ~ ಸೇರಿದಂತೆ 70ಕ್ಕೂ ಹೆಚ್ಚು ಲೇಖನಗಳು `ಇಂಗ್ಲಿಷ್ ಜರನಲ್~, `ಪ್ರಜಾವಾಣಿ~ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ಭಾರತೀಯ ಸಂವಿಧಾನ~ ವಿಷಯದಲ್ಲಿ ಆಳ ಅಧ್ಯಯನ ನಡೆಸಿರುವ ಇವರು ಮಂಡ್ಯದ ನಿರಂಜನ ಅಕಾಡೆಮಿ ಏರ್ಪಡಿಸಿದ್ದ `ಸ್ಪರ್ಧಾ ಸಂವಿಧಾನ ಕಾರ್ಯಾಗಾರ~ದಲ್ಲಿ ನಿರಂತರ 12 ಗಂಟೆಗಳ ಕಾಲ ತರಬೇತಿ ನೀಡಿದ್ದಾರೆ. 3 ಬಾರಿ 12 ಗಂಟೆಗಳ ಕಾಲ ತರಬೇತಿ ನೀಡಿ ದಾಖಲೆ ನಿರ್ಮಿಸಿದ್ದಾರೆ.

  ಕೃತಿಗಳು: ಸುಧಾಕರ್ ಹೊಸಳ್ಳಿ ಇದುವರೆಗೆ 10 ಕೃತಿಗಳನ್ನು ರಚಿಸಿದ್ದಾರೆ. ಇವರ `ಭಾರತ ಸಂವಿಧಾನ~ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಪಠ್ಯವಾಗಿ ಆಯ್ಕೆಗೊಂಡಿರುವುದು ವಿಶೇಷ. ಇವರ ಮತ್ತೊಂದು ಕೃತಿ `ಭಾರತೀಯ ಸರ್ಕಾರ ಮತ್ತು ರಾಜಕೀಯ~ ಕೃತಿ ಜನ ಮನ್ನಣೆ ಗಳಿಸಿದೆ. ಇವರ `ಅಣ್ಣಾ ಹಜಾರೆ ಮತ್ತು ಜನ ಲೋಕಪಾಲ್~ ಕೃತಿ ಸಂಕೀರ್ತನ ಪತ್ರಿಕೆಯಲ್ಲಿ ಸರಣಿಯಂತೆ ಪ್ರಕಟವಾಗುತ್ತಿದೆ. ಮೈಸೂರಿನ ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಎಎಸ್ ಪ್ರಾಥಮಿಕ ಪರೀಕ್ಷೆಗೂ ಮುನ್ನ~, `ಪ್ರೌಢಶಾಲಾ ಶಿಕ್ಷಕ ಹುದ್ದೆಯ ಪರೀಕ್ಷಾ ಮಾರ್ಗದರ್ಶಿ~~,  `ಹಳ್ಳಿಗುಡಿ ಭೂ ಕರ್ಮಕಾಂಡ~, `ಆಂಗ್ಲ ಮಾಧ್ಯಮದ ವಿರೋಧಕ್ಕೆ ವಿಮರ್ಶೆ ಅಗತ್ಯ~, ಬೌದ್ಧಿಕ ಭಯೋತ್ಪಾದನೆಯ ಔಚಿತ್ಯ~ ಇತರ ಲೇಖನಗಳು ಚರ್ಚೆಗೆ ಗ್ರಾಸವಾಗಿವೆ. ಸ್ಪರ್ಧಾ ತಜ್ಞ ಸುಧಾಕರ್ ಹೊಸಳ್ಳಿ ಅವರಿಂದ ಸಲಹೆ, ಮಾರ್ಗದರ್ಶನ ಪಡೆಯಲು ಬಯಸುವವರು ಮೊ:97424 08046 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.