ಮದ್ದೂರು: ಜೋಲುತ್ತಿದ್ದ ವಿದ್ಯುತ್ ತಂತಿಗಳು ಶಾರ್ಟ್ ಸರ್ಕ್ಯೂಟ್ ಆಗಿ ಮೂರು ಹುಲ್ಲಿನ ಮೆದೆಗಳು ಬೆಂಕಿಗೆ ಆಹುತಿಯಾದ ಘಟನೆ ಸಮೀಪದ ವೈದ್ಯನಾಥಪುರದಲ್ಲಿ ಶುಕ್ರವಾರ ನಡೆದಿದೆ.
ಸೆಸ್ಕ್ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ಚನ್ನಬೋರಯ್ಯ, ಶ್ರೀಕಂಠಯ್ಯ, ವಿ.ಟಿ.ನಾಗೇಂದ್ರ ಅವರಿಗೆ ಸೇರಿದ 3 ಮೆದೆ ಹುಲ್ಲು ಬೆಂಕಿಗೆ ಆಹುತಿಯಾಗಿದ್ದು, ರೂ.1 ಲಕ್ಷ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮಸ್ಥರು ವಾಲಿದ ಕಂಬ ಹಾಗೂ ಜೋಲುತ್ತಿದ್ದ ತಂತಿ ಬದಲಾವಣೆಗೆ ಆಗ್ರಹಿಸಿ ಹಲವು ಬಾರಿ ಸೆಸ್ಕ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸರಿಪಡಿಸದಿರುವ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರ್ ಕಾರನ್ನು ಅಡ್ಡಗಟ್ಟಿ ಅವರು ವಿರುದ್ಧ ಘೋಷಣೆ ಕೂಗಿದರು.
ಶನಿವಾರ ತಂತಿ ಹಾಗೂ ಕಂಬವನ್ನು ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಭರವಸೆ ಸಲಹೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಹುಲ್ಲಿನ ಮೆದೆಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.