ADVERTISEMENT

‘ಕಾರ್ಖಾನೆ ಲಾಭದಲ್ಲಿದೆ; ವದಂತಿಗೆ ಕಿವಿಗೊಡಬೇಡಿ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 5:58 IST
Last Updated 10 ಮಾರ್ಚ್ 2014, 5:58 IST

ಕಿಕ್ಕೇರಿ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಲಾಭದಲ್ಲಿದ್ದು, ವದಂತಿಗಳಿಗೆ ಕಿವಿಗೊಡಬಾರದು ಎಂದು ಚನ್ನರಾಯಪಟ್ಟಣದ ಶಾಸಕ ಸಿ.ಎನ್. ಬಾಲಕೃಷ್ಣ ರೈತರಲ್ಲಿ ವಿನಂತಿಸಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರಿಗೆ ಉಚಿತ ಸಕ್ಕರೆ ವಿತರಣೆ ಮಾಡಿ ಮಾತನಾಡಿದರು.

ಕಾರ್ಖಾನೆಯನ್ನು ೩೦ವರ್ಷಗಳ ಅವಧಿಗೆ ₨ ೧೦೭ಕೋಟಿಗೆ ಲೀಸ್ ನೀಡಲಾಗಿದೆ. ₨ ೪ ಕೋಟಿ ಲಾಭಾಂಶದಲ್ಲಿದೆ. ಕಾರ್ಖಾನೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಚರ-ಸ್ಥಿರಾಸ್ತಿ ಇದ್ದು, ಎಲ್ಲವು ಕಾನೂನು ಬದ್ಧವಾಗಿದೆ. ಷೇರುದಾರರಿಗೆ ಪ್ರಪ್ರಥಮವಾಗಿ ಶ್ರೇಷ್ಟ ಗುಣಮಟ್ಟದ ಎಂ೩ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿರುವ ರಾಜ್ಯದಲ್ಲಿನ ಏಕೈಕ ಕಾರ್ಖಾನೆ ಇದು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಅವರು ಹೇಳಿದರು.

ತಾಲ್ಲೂಕಿನ ಶಾಸಕ ಕೆ.ಸಿ. ನಾರಾಯಣಗೌಡ ಮಾತನಾಡಿ, ಕೋರಮಂಡಲ್ ಹಾಗೂ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗಳು ರೈತರ ಕಣ್ಣಾಗಿದ್ದು, ಯಾವುದೇ ಸಮಸ್ಯೆ ಬಂದರೂ ಬಗೆಹರಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ಕಾರ್ಖಾನೆ ಅಧ್ಯಕ್ಷ ಬಿ.ಸಿ. ಮಂಜುನಾಥ್, ನಿರ್ದೇಶಕ ತೇಜಸ್ವಿ ಕಿರಣ್, ಆನೆಗೂಳ ಎ.ಆರ್. ಮಂಜುನಾಥ್, ಕಾಯಿ ಮಂಜೇಗೌಡ, ಕೆ.ಜಿ. ಅಣ್ಣಯ್ಯ, ಜಿಲ್ಲಾ ಸಹಕಾರ ಅಧ್ಯಕ್ಷ ಕೆ.ಜಿ. ತಮ್ಮಣ್ಣ, ಮಹದೇವು ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.