ಸಂತೇಬಾಚಹಳ್ಳಿ: ಸಂತೇಬಾಚಹಳ್ಳಿ ಹೋಬಳಿಯ ಆಚಮನಹಳ್ಳಿ-ಯಲಾದಹಳ್ಳಿ ಕೆರೆಯು 20 ವರ್ಷಗಳ ನಂತರ ಕೋಡಿಬಿದ್ದ ಹಿನ್ನೆಲೆಯಲ್ಲಿ ಸಚಿವ ಡಾ.ನಾರಾಯಣಗೌಡ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದರು.
ಆಚಮನಹಳ್ಳಿ ಗ್ರಾಮದಿಂದ ಮೂರು ಕಿ.ಮೀ ದೂರಲ್ಲಿ ಹಾದುಹೋಗಿರುವ ಹೇಮಾವತಿ ಜಲಾಶಯ ಯೋಜನೆಯ ಎ.ಜಿ.ರಾಮಚಂದ್ರರಾವ್ ನಾಲೆಯ ಬಳಿ ಪಂಪ್ಹೌಸ್ ನಿರ್ಮಿಸಿ, ಪೈಪ್ಲೈನ್ ಅಳವಡಿಸಿ ಕೆರೆಗೆ ನೀರು ತುಂಬಿಸಲಾಗು
ತ್ತಿದೆ. ಇದಕ್ಕಾಗಿ ತಂದೆ–ತಾಯಿಗಳಾದ ಪುಟ್ಟಮ್ಮ ಚಿಕ್ಕೇಗೌಡರ ಹೆಸರಿನಲ್ಲಿ ₹6 ಲಕ್ಷವನ್ನು ವೈಯಕ್ತಿಕವಾಗಿ ನೀಡಿದ್ದನ್ನು ಸ್ಮರಿಸಿದ ಗ್ರಾಮಸ್ಥರು, ಸಚಿವ ನಾರಾಯಣಗೌಡರಿಗೆ ‘ಗಂಗಾಪುತ್ರ’ ಬಿರುದು ನೀಡಿ ಗೌರವಿಸಿದರು.
ಆಚಮನಹಳ್ಳಿ ಗ್ರಾಮದಲ್ಲಿ ₹10 ಲಕ್ಷ ವೆಚ್ಚದ ಮುಖ್ಯರಸ್ತೆಯ ಅಭಿವೃದ್ಧಿಗೆ ಸಚಿವ ನಾರಾಯಣಗೌಡ ಭೂಮಿಪೂಜೆ ಮಾಡಿದರು.
‘ತಾಲ್ಲೂಕಿನ ಅಭಿವೃದ್ಧಿಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ 3ನೇ ಬಾರಿಗೆ ಶಾಸಕನಾಗಿ ಪ್ರಮುಖವಾದ ಮೂರು ಖಾತೆಗಳಿಗೆ ಸಚಿವನಾಗಿದ್ದೇನೆ. ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ 50ಕ್ಕೂ ಹೆಚ್ಚಿನ ಕೆರೆಕಟ್ಟೆಗಳನ್ನು ತುಂಬಿಸಲು ಮುಖ್ಯಮಂತ್ರಿಯವರು ₹212 ಕೋಟಿ ರೂಪಾಯಿ ವೆಚ್ಚದಲ್ಲಿ ಗೂಡೆಹೊಸಳ್ಳಿ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ಹಣಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ’ ಎಂದರು.
ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್, ತಾ.ಪಂ ಮಾಜಿ ಸದಸ್ಯ ಬಿಲ್ಲೇನಹಳ್ಳಿ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಓಬಿಸಿ ಘಟಕದ ಹೋಬಳಿ ಅಧ್ಯಕ್ಷ ನಿಂಗರಾಜು, ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕುಮಾರ್, ಬಿಜೆಪಿ ಮುಖಂಡರಾದ ಸೋಮಶೇಖರ್, ಮರೀಗೌಡ, ಶ್ರೀಧರ್, ಕುಂದೂರು ಜಗದೀಶ್, ಮೊಟ್ಟೆಮಂಜು, ಕೃಷ್ಣೇಗೌಡ, ಭಾರತಿಪುರ ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.