ADVERTISEMENT

ಬಸರಾಳು ಅಭಿವೃದ್ಧಿಗೆ ₹30 ಕೋಟಿ ಅನುದಾನ: ಶಾಸಕ ರವಿಕುಮಾರ್‌ ಭರವಸೆ

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 13:57 IST
Last Updated 11 ಆಗಸ್ಟ್ 2024, 13:57 IST
ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್‌ ಅವರು ಭೂಮಿಪೂಜೆ ನೆರವೇರಿಸಿದರು 
ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್‌ ಅವರು ಭೂಮಿಪೂಜೆ ನೆರವೇರಿಸಿದರು    

ಮಂಡ್ಯ: ‘ಲೋಕಸಭೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡದಿದ್ದರೂ ಯಾವುದನ್ನು ಮನಸಿನಲ್ಲಿಟ್ಟುಕೊಳ್ಳದೆ ಬಸರಾಳು ಹೋಬಳಿಯನ್ನು ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ’ ಎಂದು ಶಾಸಕ ಪಿ.ರವಿಕುಮಾರ್‌ ಭರವಸೆ ನೀಡಿದರು.

ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ವಿರೋಧ ಪಕ್ಷದವರು ಕೇವಲ ಪೂಜೆ ಮಾಡಿ ಹೋಗುತ್ತಿದ್ದರು. ನಾವು ಉದ್ಘಾಟನೆ ಮಾಡುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನೀವು ನಡೆದುಕೊಂಡಿದ್ದು ನನಗೆ ಇಷ್ಟ ಆಗಲಿಲ್ಲ. ಕೆಲಸ ಮಾಡುವವರಿಗೆ ಮತ ಹಾಕಬೇಕು. ಕೈಗೆ ಸಿಗದವರಿಗೆ ಮತ ಹಾಕಿದ್ದೀರಿ’ ಎಂದು ವಿಷಾದಿಸಿದರು.

ADVERTISEMENT

₹ 2 ಕೋಟಿ ವೆಚ್ಚದಲ್ಲಿ ಕೃಷಿ ಭವನ, ₹ 7 ಕೋಟಿ ವೆಚ್ಚದಲ್ಲಿ ಹೇಮಾವತಿ ನಾಲಾ ಆಧುನೀಕರಣ, ಸಾರ್ವಜನಿಕ ಸ್ಮಶಾನಕ್ಕೆ ₹ 20 ಲಕ್ಷ, ಬಸರಾಳು ಗ್ರಾಮದಿಂದ ಮುತ್ತೇಗೆರೆ ಗ್ರಾಮಕ್ಕೆ ₹ 10 ಕೋಟಿ ವೆಚ್ಚದಲ್ಲಿ ರಸ್ತೆ ಆಧುನೀಕರಣ, ನಾಡ ಕಚೇರಿ ಮತ್ತು 50 ಬೆಡ್ ಆಸ್ಪತ್ರೆ ಯೋಜನೆ ಸಿದ್ಧತೆ, ₹ 25 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಎಸ್ಸಿ ಕಾಲೊನಿ ಅಭಿವೃದ್ಧಿಗೆ ₹ 25 ಲಕ್ಷ, ಬಸರಾಳು ಹೋಬಳಿ ಕೇಂದ್ರದ ರಸ್ತೆಗೆ ₹ 1 ಕೋಟಿ ಸೇರಿದಂತೆ ಬಸರಾಳು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒಟ್ಟು ₹ 30 ಕೋಟಿ ಅನುದಾನ ನೀಡಲಾಗುವುದು’ ಎಂದು ವಿವರಿಸಿದರು.

‘ಚಿಕ್ಕಮಂಡ್ಯ ಗ್ರಾಮದಿಂದ ಬಿಳಿದೆಗಲು ಗ್ರಾಮದವರೆಗೆ ಗುಂಡಿ ಬಿದ್ದಿರುವ ರಸ್ತೆಗೆ ₹ 10 ಕೋಟಿ ಮೀಸಲಿಡಲಾಗಿದೆ. ಮಳೆಗಾಲ ಕಳೆದ ತಕ್ಷಣ ಕಾಮಗಾರಿ ಆರಂಭವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.