ADVERTISEMENT

₹ 57 ಲಕ್ಷ ಉಳಿತಾಯ ಬಜೆಟ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 7:25 IST
Last Updated 21 ಫೆಬ್ರುವರಿ 2018, 7:25 IST
ಮಳವಳ್ಳಿ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ರಿಯಾಜಿನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬಜೆಟ್‌ ಮಂಡಿಸಿದರು
ಮಳವಳ್ಳಿ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ರಿಯಾಜಿನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬಜೆಟ್‌ ಮಂಡಿಸಿದರು   

ಮಳವಳ್ಳಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪುರಸಭೆ 2018-19 ನೇ ಸಾಲಿನ ₹ 57.30 ಲಕ್ಷ ಉಳಿತಾಯ ಬಜೆಟ್ ಅನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಮಂಡಿಸಿದರು.

ಅಧ್ಯಕ್ಷ ರಿಯಾಜಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಆರಂಭಿಕ ಶಿಲ್ಕು ₹ 3.67 ಕೋಟಿ ಸೇರಿದಂತೆ, ನಿರೀಕ್ಷಿತ ₹ 20.18 ಕೋಟಿ ಆದಾಯ ಸೇರಿ ಒಟ್ಟು ₹ 23.85 ಕೋಟಿ ಹಣದಲ್ಲಿ ಒಟ್ಟು ನಿರೀಕ್ಷಿತ ₹ 23.28 ಕೋಟಿ ಖರ್ಚು ಕಳೆದು ಉಳಿತಾಯ ಬಜೆಟ್ ₹ 57.30 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಯಿತು.ನಂತರ ಚರ್ಚೆಯಲ್ಲಿ ಸದಸ್ಯ ಕೃಷ್ಣ ಮಾತನಾಡಿ, ‘ಪಟ್ಟಣದ ಜನರು ಬದುಕಿರುವಾಗ ನೆಮ್ಮದಿ ಕೊಟ್ಟಿಲ್ಲ. ಮೃತಪಟ್ಟಾಗಲಾದರು ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸದಸ್ಯ ಎಂ.ಎಚ್.ದೊಡ್ಡಯ್ಯ ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್ ಲೈನ್‌ಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್ ಬಿಲ್ ಪಡೆಯಬೇಕು ಹಾಗೂ ಪಟ್ಟಣದ ಹೊರವಲಯಗಳಲ್ಲಿ ಕಲ್ಲು ಗಣಿಗಾರಿಕೆಯ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು, ಇಲ್ಲಿ ಶೇಖರಣೆಗೆ ಲೋಡ್ ತುಂಬಿಕೊಂಡು ಬರುವ ಲಾರಿಗಳ ಓವರ್ ಲೋಡ್‌ಗಳಿಂದ ಪಟ್ಟಣದ ರಸ್ತೆಗಳು ಹದಗೆಡುತ್ತಿದ್ದು ಅಲ್ಲಿನ ಮಾರಾಟಗಾರರಿಗೆ ಲೈಸನ್ಸ್ ಪಡೆದುಕೊಳ್ಳಲು ನೋಟಿಸ್ ಜಾರಿ ಮಾಡಿ ಸಂಪನ್ಮೂಲ ಕ್ರೋಡೀಕರಿಸುವಂತೆ ಸಲಹೆ ನೀಡಿದರು.

ADVERTISEMENT

ಸದಸ್ಯ ಡಿ.ಶಿವಕುಮಾರ್, ಪುರಸಭೆ ನಿರೀಕ್ಷಿತ ಬರುವ ಆದಾಯದಲ್ಲಿ ಪಟ್ಟಣದ 24 ವಾರ್ಡ್‌ಗಳಿಗೆ ಸಮನಾಗಿ ಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಪುರಸಭೆಗೆ ಬರುವ ಆದಾಯದಲ್ಲಿ ನಿಯಮಾವಳಿ ಪ್ರಕಾರ ಪಟ್ಟಣದ ವಿವಿಧ ನಿರ್ವಹಣೆಗೆ ವೆಚ್ಚ ಮಾಡಿ ಉಳಿದ ಹಣವನ್ನು ವಾರ್ಡ್‌ಗಳಿಗೆ ಸಮನಾಗಿ ಹಂಚಿಕೆ ಮಾಡಲಾಗುವುದು ಎಂದು ಲೆಕ್ಕಾಧಿಕಾರಿ ನಿತಿನ್ ತಿಳಿಸಿದರು.

‘ನಾಲ್ಕು ವರ್ಷಗಳ ಪ್ರತಿ ಬಜೆಟ್‌ನಲ್ಲಿ ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಅನುದಾನ ನಿಗದಿಗೊಳಿಸಲಾಗುತ್ತಿದೆ. ಆದರೆ ಇಂದಿನವರೆಗೂ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಪ್ರವಾಸಿಗರು ಹಾಗೂ ಪಟ್ಟಣಕ್ಕೆ ಬಂದು ಹೋಗುವ ಸಾರ್ವಜನಿಕರು ಪರದಾಡುವಂತಾಗಿದೆ. ನಿಗದಿತ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಬೇಕೆಂದು’ ಎಂದು ಸದಸ್ಯ ಚಿಕ್ಕರಾಜು ಒತ್ತಾಯಿಸಿದರು.

ಸದಸ್ಯ ಕಿರಣ್ ಶಂಕರ್, ಪಟ್ಟಣದ ಹೊಸ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜಿಗೆ ಮೀಟರ್ ಅಳವಡಿಸುವುದರಿಂದ ಮುಂಬರುವ ವಾರ್ಷಿಕ ಪುರಸಭೆ ನಿರೀಕ್ಷಿತ ಆದಾಯವನ್ನು ನಿಗದಿಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಬಹುದಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಮಂಜುನಾಥ್, ‘ಹೊಸದಾಗಿ ಪಟ್ಟಣಕ್ಕೆ ಅಳವಡಿಕೆಯಾಗುತ್ತಿರುವ ಕುಡಿಯುವ ನೀರಿನ ಕಾಮಗಾರಿ ಮುಕ್ತಾಯದ ನಂತರ ಪುರಸಭೆಗೆ ಹಸ್ತಾಂತರಿಸಿದ ನಂತರವಷ್ಟೇ ಈ ಹೊಸ ಆದಾಯವನ್ನು ನಿರೀಕ್ಷೆ ಮಾಡಬೇಕಾಗಿರುವುದರಿಂದ ಬಜೆಟ್ ಪ್ರತಿಗೆ ಸೇರಿಸಲಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪುರಸಭೆ ಸದಸ್ಯರ ಅಧ್ಯಯನ ಪ್ರವಾಸಕ್ಕೆಂದು ಹಣ ನಿಗದಿಪಡಿಸಲಾಗಿದೆ. ಆದರೆ ನಮ್ಮ ಆಡಳಿತಾವಧಿಗೆ ನಾಲ್ಕು ವರ್ಷಗಳು ಕಳೆದು ಹೋಗುತ್ತಿದ್ದು, ಈ ಬಗ್ಗೆ ಪೌರಾಡಳಿತ ಇಲಾಖೆಗೆ ಪತ್ರ ಬರೆದು ಉಳಿದಿರುವ ದಿನಗಳಲ್ಲಾದರೂ ಅಧ್ಯಯನ ಪ್ರವಾಸ ಮಾಡಿಸುವಂತೆ ಹಲವು ಸದಸ್ಯರು ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಿ.ವಿ. ಸುಮಾ, ಇತರ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.