ಮಂಡ್ಯ: ರೈತರು ಕಬ್ಬು ಸರಬರಾಜು ಮಾಡಿ 14 ದಿನಗಳು ಕಳೆದಿದ್ದರೂ ಎಫ್.ಆರ್.ಪಿ ದರದಂತೆ ಪೂರ್ಣವಾಗಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು 10 ದಿನದೊಳಗೆ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗದಿರುವ ಸಂಬಂಧ ದೂರುಗಳು ಕೇಳಿ ಬರುತ್ತಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಕಾರ್ಖಾನೆಗಳು ರೈತರಿಗೆ ಕಬ್ಬು ಹಣ ಪಾವತಿ ಮಾಡಲು ಬಾಕಿ ಉಳಿಸಿಕೊಂಡಿರುವ ಮೊತ್ತದ ಮಾಹಿತಿ ಮತ್ತು ವಿಳಂಬಕ್ಕೆ ಕಾರಣ ತಿಳಿಸುವಂತೆ ಸಭೆಗೆ ಹಾಜರಿದ್ದ ಎಲ್ಲಾ ಕಾರ್ಖಾನೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್.ಪೇಟೆ ಐ.ಸಿ.ಎಲ್ ಷುಗರ್ಸ್ 501365 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್.ಆರ್.ಪಿ.ಪ್ರತಿ ಮೆಟ್ರಿಕ್ ಟನ್ಗೆ ₹2944 ನಿಗದಿಪಡಿಸಿದ್ದು, 14 ದಿನಗಳನ್ನು ಮೀರಿ ರೈತರಿಗೆ ಪಾವತಿಸಲು ₹14.14 ಕೋಟಿ ಬಾಕಿಯಿದೆ. ಕೊಪ್ಪ ಎನ್.ಎಸ್.ಎಲ್.ಷುಗರ್ಸ್ 7,43,200 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್.ಆರ್.ಪಿ ಪ್ರತಿ ಮೆಟ್ರಿಕ್ ಟನ್ಗೆ ₹2,920 ನಿಗದಿಯಾಗಿದ್ದು, 19.21 ಕೋಟಿ ಬಾಕಿ ಇದೆ. ಕೆ.ಎಂ.ದೊಡ್ಡಿ ಶ್ರೀ ಚಾಮುಂಡೇಶ್ವರಿ ಷುಗರ್ಸ್ 8,00,725 ಮೆಟ್ರಿಕ್ ಟನ್ ಕಬ್ಬು ನುರಿದಿದ್ದು, ರೈತರಿಗೆ ಪಾವತಿಸಲು ₹16.30 ಕೋಟಿ ಬಾಕಿ ಇದೆ.
‘ಪಾಂಡವಪುರ ಎಂ.ಆರ್.ಎನ್ ಕೇನ್, ಪಿ.ಎಸ್.ಎಸ್. ಕೆ ಶುಗರ್ಸ್ 5,39,575 ಮೆಟ್ರಿಕ್ ಟನ್ ಕಬ್ಬು ನುರಿದಿದ್ದು, ಟನ್ಗೆ ₹2,920 ನಿಗದಿಯಾಗಿದ್ದು, ₹3.83 ರೂ.ಕೋಟಿ ಬಾಕಿ ಇದೆ. ಮೈಷುಗರ್ ಸಕ್ಕರೆ ಕಾರ್ಖಾನೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ರೈತರಿಗೆ ಯಾವುದೇ ಬಾಕಿ ಉಳಿಸಿಲ್ಲ’ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಒಟ್ಟಾರೆ ರೈತರಿಗೆ ₹53.48 ಕೋಟಿ ಬಾಕಿಯಿದ್ದು, ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆ, ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಾಗೂ ಕೋರಮಂಡಲ್ ಸಕ್ಕರೆ ಕಾರ್ಖಾನೆಗಳು ಹೆಚ್ಚು ಬಾಕಿ ಉಳಿಸಿಕೊಂಡಿದ್ದು, 10 ದಿನಗಳೊಳಗಾಗಿ ಸಂಬಂಧಪಟ್ಟ ರೈತರಿಗೆ ಪೂರ್ಣವಾಗಿ ಪಾವತಿಸಬೇಕು ಎಂದು ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.