ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ನ ಉಪ್ಪರಿಕೆ ದನಗಳ ಜಾತ್ರೆ ಆರಂಭವಾಗಿ ಮೂರು ದಿನ ಕಳೆದಿದ್ದು, ದಿನದಿಂದ ದಿನಕ್ಕೆ ಜಾತ್ರೆ ಕಳೆಗಟ್ಟುತ್ತಿದೆ.
ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ರೈತರು ತಮ್ಮ ರಾಸುಗಳನ್ನು ಕರೆ ತರುತ್ತಿದ್ದಾರೆ. ಹಳ್ಳಿಕಾರ್ ಮತ್ತು ಅಮೃತಮಹಲ್ ತಳಿಯ ದನಗಳು ಹೆಚ್ಚು ಬರುತ್ತಿವೆ. ಅಲ್ಲಲ್ಲಿ ಮಲೆನಾಡು ಗಿಡ್ಡ, ಎಮ್ಮೆಗಳು, ಸೀಮೆ ಹಸುಗಳು ಕೂಡ ಕಂಡು ಬರುತ್ತಿವೆ. ಹಾಲುಬಾಯಿ, ಎರಡು ಹಲ್ಲು, ನಾಲ್ಕು ಹಲ್ಲು, 6 ಹಲ್ಲು, ಕಡೆ ಹಲ್ಲು ವಯಸ್ಸಿನ ರಾಸುಗಳು ಜಾತ್ರೆಗೆ ಬರುತ್ತಿದ್ದು, ಕೊಡು– ಕೊಳ್ಳುವ ವ್ಯವಹಾರ ಬಿರುಸಿನಿಂದ ನಡೆಯುತ್ತಿದೆ.
ಬೆಳಗೊಳ ಗ್ರಾಮದ ರವಿ ಅವರು ₹ 4 ಲಕ್ಷ ಬೆಲೆಯ ಹಳ್ಳಿಕಾರ್ ತಳಿಯ ಎತ್ತುಗಳನ್ನು ಜಾತ್ರೆಗೆ ಹೊಡೆದು ತಂದಿದ್ದಾರೆ. ₹ 30 ಸಾವಿರದಿಂದ ₹ 4 ಲಕ್ಷ ಬೆಲೆ ಬಾಳುವ ರಾಸುಗಳು ಜಾತ್ರೆಯಲ್ಲಿವೆ. ಇನ್ನೂ ಒಂದು ವಾರ ಜಾತ್ರೆ ನಡೆಯಲಿದ್ದು, ಇಲ್ಲಿಗೆ ಮತ್ತಷ್ಟು ರಾಸುಗಳು ಬರುವ ನಿರೀಕ್ಷೆ ಇದೆ ಎಂದು ಜಾತ್ರಾ ಸಮಿತಿಯ ಕಾರ್ಯದರ್ಶಿ ಎಂ.ಬಿ. ಕುಮಾರ್ ತಿಳಿಸಿದರು.
ಶಾಸಕ ಜಿ.ಟಿ. ದೇವೇಗೌಡ ಅವರು ಬುಧವಾರ ದನಗಳ ಜಾತ್ರೆಗೆ ಭೇಟಿ ನೀಡಿ ರಾಸುಗಳು ಮತ್ತು ವಹಿವಾಟಿನ ಬಗ್ಗೆ ಮಾಹಿತಿ ಪಡೆದರು. ಜಾತ್ರಾ ಸಮಿತಿಯ ಅಧ್ಯಕ್ಷ ದಾಸೇಗೌಡ, ಪಿಎಸ್ಐ ಬ್ಯಾಟರಾಯಗೌಡ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ, ಡಾ.ಸೌಮ್ಯಾ, ಹಾಲೆಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.