ADVERTISEMENT

ರಸ್ತೆಯಲ್ಲೇ ಉರುಳಿದ ಕಬ್ಬಿನ ಟ್ರಾಕ್ಟರ್‌

ಓಡಿ ಪಾರಾದ ಜನರು: ವಾಹನದಡಿಗೆ ಸಿಕ್ಕ ಹಲವು ದ್ವಿಚಕ್ರ ವಾಹನಗಳು ನಜ್ಜುಗುಜ್ಜು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:30 IST
Last Updated 21 ಸೆಪ್ಟೆಂಬರ್ 2020, 2:30 IST
ಕಿಕ್ಕೇರಿಯಲ್ಲಿ ಕಬ್ಬಿನ ಟ್ರಾಕ್ಟರ್ ಉರುಳಿದ್ದರಿಂದ ಜನಜಂಗುಳಿ ಸೇರಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು
ಕಿಕ್ಕೇರಿಯಲ್ಲಿ ಕಬ್ಬಿನ ಟ್ರಾಕ್ಟರ್ ಉರುಳಿದ್ದರಿಂದ ಜನಜಂಗುಳಿ ಸೇರಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು   

ಕಿಕ್ಕೇರಿ: ಪಟ್ಟಣದ ಹಳೆ ಬಸ್‌ ನಿಲ್ದಾಣದ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಬ್ಬು ತುಂಬಿದ ಟ್ರಾಕ್ಟರ್ ಉರುಳಿ ಬಿದ್ದು ಕೂದಲೆಳೆ ಅಂತರದಲ್ಲಿ ಹಲವು ಪಾದಚಾರಿಗಳು ಪಾರಾದರು.

ಭಾನುವಾರ ಸಂಜೆ ಹೋಬಳಿಯ ಉದ್ದಿನಮಲ್ಲನ ಹೊಸೂರುವಿನ ರೈತ ದೇವರಾಜೇಗೌಡ ಜಮೀನಿನ ಕಬ್ಬನ್ನು ಟ್ರಾಕ್ಟರ್ ಮೂಲಕ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತಿತ್ತು. ಪಟ್ಟಣದ ಮಂದಗೆರೆ ತಿರುವಿನ ಬಳಿ ಅಧಿಕ ಪ್ರಮಾಣದ ಕಬ್ಬನ್ನು ತುಂಬಿದ್ದ ಕಾರಣ ಟ್ರಾಕ್ಟರ್ ಟ್ರಾಲಿ ಮಗುಚಿ ಬಿದ್ದಿದೆ. ಹತ್ತಿರ ರಸ್ತೆಬದಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಮಳೆ ಬರುತ್ತಿದ್ದ ಕಾರಣ ಸ್ವಲ್ಪ ದೂರವಿದ್ದರು. ಹಲವು ದ್ವಿಚಕ್ರ ವಾಹನಗಳು ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು. ಟ್ರಾಕ್ಟರ್ ದ್ವಿಚಕ್ರ ವಾಹನದ ಮೇಲೆ ಉರುಳಿದೆ. ಹಲವು ವಾಹನಗಳು ನಜ್ಜುಗುಜ್ಜಾಗಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಟ್ರಾಕ್ಟರ್ ಉರುಳುವುದನ್ನು ನೋಡಿ ಕೂಗಿದಾಗ ಅಕ್ಕಪಕ್ಕ ಹೊರಟವರು ಓಡಿ ಪ್ರಾಣ ಉಳಿಸಿಕೊಂಡರು. ಚಾಲಕ ಕೂಡಾ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ADVERTISEMENT

ಟ್ರಾಕ್ಟರ್ ಬಿದ್ದ ಸಪ್ಪಳಕ್ಕೆ ಅಕ್ಕಪಕ್ಕದಲ್ಲಿದ್ದ ಅಂಗಡಿ ಮನೆಯವರು ಹೊರಗೆ ಓಡಿ ಬಂದರು. ಕೆಲ ಹೊತ್ತು ಟ್ರಾಫಿಕ್‌ ಜಾಮ್‌ ಆಗಿತ್ತು. ಸ್ಥಳಕ್ಕೆ ಪೊಲೀಸರು ಬಂದು ಜನಜಂಗುಳಿ ನಿಯಂತ್ರಿಸಿ, ಟ್ರಾಕ್ಟರ್‌ನ್ನು ಕ್ರೇನ್ ಮೂಲಕ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಟ್ರಾಕ್ಟರ್ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಜನ ಓಡಿದ ಕಾರಣ ಕಲೆವರು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.