ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್ಎಸ್ ಜಲಾಶಯದಿಂದ ಹಲವು ದಿನಗಳಿಂದ ನಿರಂತರವಾಗಿ ನೀರು ಹರಿಸುತ್ತಿದ್ದರೂ ಕನ್ನಡ ಚಲನಚಿತ್ರ ನಟ, ನಟಿಯರು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಹಿರಿಯ ವಕೀಲ ಜಯಸ್ವಾಮಿ ಪ್ರಶ್ನಿಸಿದರು.
ತಮಿಳುನಾಡಿಗೆ ಕೆಆರ್ಎಸ್ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ವಕೀಲರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ನಟ, ನಟಿಯರು ಚಲನ ಚಿತ್ರಗಳಲ್ಲಿ ಮಾತ್ರ ಕಾವೇರಿ ನದಿಯ ಬಗ್ಗೆ ಮಾತನಾಡಿದರೆ ಆಗುವುದಿಲ್ಲ. ವಾಸ್ತವದಲ್ಲೂ ಕಾವೇರಿ ನೀರು ಮತ್ತು ಅದನ್ನೇ ನೆಚ್ಚಿಕೊಂಡಿರುವ ರೈತರ ಬಗ್ಗೆ ಕಾಳಜಿ ತೋರಿಸಬೇಕು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿನಿಮಾ ಕಲಾವಿದರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಈ ಬಾರಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ಕೆಆರ್ಎಸ್ ಜಲಾಶಯ ಅರ್ಧದಷ್ಟೂ ತುಂಬಿಲ್ಲ. ಮುಂದಿನ ದಿನಗಳಲ್ಲಿ ಕೂಡ ಸಮಪರ್ಕವಾಗಿ ಮಳೆ ಬೀಳುವುದಿಲ್ಲ ಎಂದು ತಜ್ಞರ ವರದಿಗಳು ಹೇಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ ಇರುವ ಅಲ್ಪ ಪ್ರಮಾಣದ ನೀರನ್ನೂ ತಮಿಳುನಾಡಿಗೆ ಹರಿಸಿದರೆ ಕುಡಿಯಲು ಮತ್ತು ನಿಂತಿರುವ ಬೆಳೆಗಳಿಗೆ ನೀರು ಎಲ್ಲಿ ಉಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಡಿ. ಚಂದ್ರೇಗೌಡ, ಹಿರಿಯ ವಕೀಲರಾದ ಎನ್. ಕುಮಾರಸ್ವಾಮಿ, ಮರೀಗೌಡ, ಮರಿಬಸವಯ್ಯ, ಗಂಗರಾಜು, ಶಿವಶಂಕರ್, ರಾಜಶೇಖರ್, ಮಂಜುನಾಥ್, ನಾಗರಾಜು, ಟಿ. ಬಾಲರಾಜು, ಸಿ.ಎಸ್. ವೆಂಕಟೇಶ್, ನಾರಾಯಣಸ್ವಾಮಿ, ಜಿ.ಎನ್. ರವೀಶ್, ಪ್ರಭಾಕರ್, ಶಿವರಾಂ, ವನರಾಜು, ಮಹದೇವು, ಕೃಷ್ಣೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.