ADVERTISEMENT

ಪರಿಶಿಷ್ಟರ ಹಣ ದುರ್ಬಳಕೆ ಆರೋಪ: ಮುಖ್ಯಮಂತ್ರಿಗೆ ಕರಾದಸಂಸ ದೂರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:35 IST
Last Updated 30 ಜೂನ್ 2025, 13:35 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ಸೋಮವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ಡಿ ಕೆ. ಅಂಕಯ್ಯ ಮತ್ತು ಪದಾಧಿಕಾರಿಗಳು ಮನವಿ ಸಲ್ಲಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ಸೋಮವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ಡಿ ಕೆ. ಅಂಕಯ್ಯ ಮತ್ತು ಪದಾಧಿಕಾರಿಗಳು ಮನವಿ ಸಲ್ಲಿಸಿದರು   

ಶ್ರೀರಂಗಪಟ್ಟಣ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಕಲ್ಯಾಣಕ್ಕೆ ಇರುವ ಯೋಜನೆಗಳ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜಲಾಶಯದ ದಕ್ಷಿಣ ದ್ವಾರದ ಬಳಿ ಕರಾದಸಂಸ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ. ಅಂಕಯ್ಯ ಇತರರು ಮನವಿ ಅರ್ಪಿಸಿದರು.

'ಮೇಲುಕೋಟೆ ಕ್ಷೇತ್ರದ ಕುರುಬರ ಮಲ್ಲೇನಹಳ್ಳಿ ಗ್ರಾಮದಲ್ಲಿ ಕೇವಲ ಮೂರು ದಲಿತ ಕುಟುಂಬಗಳಿದ್ದು, ಅವರು ವಾಸಿಸುವ 100 ಮೀಟರ್‌ ದೂರದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ ಬಳಸಿ ₹50 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ದೂರಿದರು.

ADVERTISEMENT

ಇದೇ ಕ್ಷೇತ್ರದ ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ದಲಿತರ ಪಾಲಿನ ₹50 ಲಕ್ಷ ಹಣ ಬಳಸಲಾಗಿದೆ. ಶಂಕನಹಳ್ಳಿ ಗ್ರಾಮದಲ್ಲಿ ರಸ್ತೆ ಚೆನ್ನಾಗಿದ್ದರೂ ಅದರ ಡಾಂಬರು ಹಾಕಲಾಗಿದೆ. ಬಳೆ ಅತ್ತಿಗುಪ್ಪೆ ಗ್ರಾಮದ ದಲಿತ ಕಾಲೊನಿಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ₹50 ಲಕ್ಷ ಅನುದಾನದಲ್ಲಿ ಅರ್ಧದಷ್ಟು ಅನುದಾನವನ್ನು ಬೇರೆ ರಸ್ತೆಗೆ ಬಳಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪಾಂಡವಪುರ ತಾಲ್ಲೂಕು ಮಹದೇಶ್ವರಪುರದಲ್ಲಿ 2017–18ನೇ ಸಾಲಿನಲ್ಲಿ ಆರಂಭವಾಗಿರುವ ಡಾ.ಬಿ.ಆರ್. ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ದೇವಾಲಯದ ಮಂಟಪದಲ್ಲಿ ನಡೆಯುತ್ತಿದೆ. ಈ ಶಾಲೆಯಲ್ಲಿ 246 ಹೆಣ್ಣು ಮಕ್ಕಳಿದ್ದು, ಸ್ನಾನಗೃಹ, ಶೌಚಾಲಯದ ವ್ಯವಸ್ಥೆ ಸಮಪರ್ಕವಾಗಿಲ್ಲ. ಗುಣಮಟ್ಟದ ಆಹಾರ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಿದ್ದಾರೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.

ಚಿಕ್ಕಾಡೆ ಮದನಕುಮಾರ್‌, ಕೃಷ್ಣ, ಚಿಕ್ಕಾಯರಹಳ್ಳಿ ಮೂರ್ತಿ, ಮಾಣಿಕ್ಯನಹಳ್ಳಿ ಮಂಜು, ಹೊಸ ಕನ್ನಂಬಾಡಿ ನಿಂಗಯ್ಯ, ಅಶೋಕ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.