ಕಿಕ್ಕೇರಿ: ಹೋಬಳಿಯ ಕೋಡಿಮಾರನಹಳ್ಳಿಯಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿ ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ.
ಸಚಿವ ಕೆ.ಸಿ.ನಾರಾಯಣಗೌಡ ಅವರ ವಿಶೇಷಾಧಿಕಾರಿ ಡಾ.ಪ್ರಕಾಶ್ ಅವರು ಕಿಕ್ಕೇರಿಗೆ ಬಂದಿರುವ ವಿಷಯ ತಿಳಿದು ಗ್ರಾಮಸ್ಥರು ಊರಿನ ರಸ್ತೆ ವೀಕ್ಷಿಸುವಂತೆ ಒತ್ತಾಯಿಸಿ ಕರೆದು ಕೊಂಡು ಹೋಗಿ ತೋರಿಸಿದರು.
ಗ್ರಾಮಸ್ಥರು ಮಾತನಾಡಿ, ಕಾವೇರಿ ಜಲಾನಯನ ಯೋಜನೆಯಲ್ಲಿ ಗ್ರಾಮದ ಬಿ.ಎಂ.ರಸ್ತೆಯಿಂದ ರಾಯಕಾಲುವೆ ಅಚ್ಚುಕಟ್ಟು ಪ್ರದೇಶ, ಚೈತನ್ಯ ಕಾನ್ವೆಂಟ್ ವರೆಗೆ ₹ 41.8ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆಯಾಗಿದೆ. ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿ ಗುತ್ತಿಗೆದಾರ ಕೈಚೆಲ್ಲಿದ್ದಾರೆ. ಡಾಂಬರು ರಸ್ತೆಯನ್ನು ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆಪ ಮಾತ್ರಕ್ಕೆ ಭೂಮರಾ ಬಿಲ್ಡರ್ಸ್ ಗುತ್ತಿಗೆದಾರರಾಗಿದ್ದು, ಎಲ್ಲವೂ ಬಿಜೆಪಿ ಹೋಬಳಿ ಅಧ್ಯಕ್ಷ ಚಿಕ್ಕತರಹಳ್ಳಿ ಗುತ್ತಿಗೆದಾರ ನಾಗೇಶ್ ಕೆಲಸ ನಿರ್ವಹಿಸಿದ್ದಾರೆ. ಹೋಬಳಿಯ ಬಹುತೇಕ ರಸ್ತೆ ಕಾಮಗಾರಿಗಳೆಲ್ಲವೂ ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಪಡೆದು ಸಚಿವರ ಬೆಂಬಲಿಗರೇ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಳಪೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಪರಿಶೀಲಿಸಿ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಲಾ ಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಕೋಳಿ ಸುರೇಶ್, ಮಂಜುನಾಥ್, ಶಶಿಕುಮಾರ್, ಮಂಜು, ಬಾಲರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.