ADVERTISEMENT

ಬೆಸಗರಹಳ್ಳಿ ಕೆರೆ ಒಡಲಿಗೆ ಸೇರುತ್ತಿದೆ ತ್ಯಾಜ್ಯ

ಗ್ರಾಮದಲ್ಲಿ ಕಸ ವಿಲೇವಾರಿಯದ್ದೇ ಸಮಸ್ಯೆ, ಕಲುಷಿತಗೊಳ್ಳುತ್ತಿರುವ ಜಲಮೂಲ, ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 26 ಮೇ 2019, 17:01 IST
Last Updated 26 ಮೇ 2019, 17:01 IST
ಕೊಪ್ಪ ಹೋಬಳಿಯ ಬೆಸಗರಹಳ್ಳಿ ಗ್ರಾಮದ ಕೆರೆಯ ಕೊಡಿ ಬಳಿ ಕಸದ ರಾಶಿ ಬಿದ್ದಿದೆ (ಎಡಚಿತ್ರ). ಕೆರೆ ಕೋಡಿ ಬಳಿ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ
ಕೊಪ್ಪ ಹೋಬಳಿಯ ಬೆಸಗರಹಳ್ಳಿ ಗ್ರಾಮದ ಕೆರೆಯ ಕೊಡಿ ಬಳಿ ಕಸದ ರಾಶಿ ಬಿದ್ದಿದೆ (ಎಡಚಿತ್ರ). ಕೆರೆ ಕೋಡಿ ಬಳಿ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ   

ಕೊಪ್ಪ: ಇಲ್ಲಿನ ಬೆಸಗರಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಕಸ ಸುರಿಯ ಲಾಗುತ್ತಿದೆ. ಇದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ.‌

ಜಿಲ್ಲೆಯಲ್ಲೇ ಅತಿದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಬೆಸಗರಹಳ್ಳಿ ಪಾತ್ರವಾಗಿದೆ. ಆದರೆ, ಈ ಗ್ರಾಮದಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಬಸ್‌ ನಿಲ್ದಾಣ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಗಳು ಕಾಣುತ್ತವೆ. ಕೆರೆ ಕೋಡಿ ಬಳಿ ಕಸದ ದೊಡ್ಡ ರಾಶಿಯೇ ಬಿದ್ದಿದೆ. ಪ್ಲಾಸ್ಟಿಕ್ ವಸ್ತುಗಳು, ಮದ್ಯದ ಬಾಟಲಿಗಳೂ ಇವೆ. ಕಸವು ದುರ್ವಾಸನೆ ಬೀರುತ್ತಿದ್ದು, ಈ ಭಾಗದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಕಸ ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ. ರೋಗರುಜಿನಗಳ ಭೀತಿಯಲ್ಲಿ ಜನರು ವಾಸ ಮಾಡುವಂತಾಗಿದೆ. ಕಸವನ್ನು ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸ್ಥಳೀಯರಾದ ವೆಂಕಟೇಶ್, ಪುಟ್ಟಸ್ವಾಮಿ, ಗಿರೀಶ್, ಶಿವಕುಮಾರ್ ಒತ್ತಾಯಿಸಿದರು.

ADVERTISEMENT

ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸ್ಥಳದ ಸಮಸ್ಯೆಯಾಗಿದೆ. ಸ್ಥಳವನ್ನು ಗುರುತಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಆದೇಶಿಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಮರಿಹೆಗಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.