ಮಂಡ್ಯ: ‘ಮೇಕೆದಾಟು’ ವಿಚಾರದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ಹೋರಾಟ ಮಾಡಿದ್ದರು. ಈಗ ಅವರೇ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಗೆ ಮುಂದಾಗುತ್ತಿಲ್ಲ. ಈ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಕಾರಾರು ತೆಗೆದಿದ್ದಾರೆ. ಡಿಕೆಶಿ ತಮಿಳುನಾಡಿಗೆ ಹೋಗಿದ್ದು ಬಿರಿಯಾನಿ ತಿಂದುಕೊಂಡು ಬರೋಕಾ? ಅವರ ಬ್ರದರ್ ಅನ್ನು ಒಪ್ಪಿಸಿಬೇಕಿತ್ತಲ್ಲವೇ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್ ವೃತ್ತದವರೆಗೆ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರವನ್ನು ಪದೇ ಪದೇ ಕಾಂಗ್ರೆಸ್ನವರು ಟೀಕಿಸುತ್ತಿದ್ದಾರೆ. ಆದರೆ, ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಭೆ ಕರೆದರೆ, ಕರ್ನಾಟಕ ಮತ್ತು ತಮಿಳುನಾಡು ಎರಡೂ ಸರ್ಕಾರದವರು ಹೋಗಲಿಲ್ಲ. ಇದನ್ನೇ ಅಲ್ಲವೇ ಎರಡು ನಾಲಿಗೆ ಅನ್ನೋದು ಎಂದು ಮೂದಲಿಸಿದರು.
ಇದಕ್ಕೆ ದನಿಗೂಡಿಸಿದ ಸಿ.ಟಿ.ರವಿ ಮತ್ತು ಬಿ.ವೈ.ವಿಜಯೇಂದ್ರ, ‘ಮೇಕೆದಾಟು ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸಿ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರು. ಡಿಎಂಕೆ ದೋಸ್ತಿ ಉಳಿಸಿಕೊಳ್ಳಲು ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಿಟ್ಟರು. ಮಂಡ್ಯದಲ್ಲಿ ಕಾವೇರಿ ನಾಲೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಕೂಗು ಕಾಂಗ್ರೆಸ್ ಸರ್ಕಾರಕ್ಕೆ ಕೇಳಿಸಲೇ ಇಲ್ಲ. ಇವರು ಊರಿಗೆ ಮಾರಿ, ತಮಿಳುನಾಡಿಗೆ ಉಪಕಾರಿ ಎಂದು ತರಾಟೆಗೆ ತೆಗೆದುಕೊಂಡರು.
ಸಂವಿಧಾನ ವಿರೋಧಿ ನಡೆ:
ಮತೀಯ ಆಧಾರದ ಮೀಸಲಾತಿಗೆ ಅಂಬೇಡ್ಕರ್ ಅಂದೇ ವಿರೋಧ ವ್ಯಕ್ತಪಡಿಸಿದ್ದರು. ಮಾತೆತ್ತಿದರೆ, ಅಂಬೇಡ್ಕರ್, ಸಂವಿಧಾನ ಎಂದು ಮಾತನಾಡುವ ಕಾಂಗ್ರೆಸ್ ನಾಯಕರು, ಗುತ್ತಿಗೆಯಲ್ಲಿ ಶೇ 4ರಷ್ಟು ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ‘ಮುಸ್ಲಿಮರಿಗೆ ಕೋಟಿ, ಹಿಂದೂಗಳಿಗೆ ಟೋಪಿ’ ಹಾಕುತ್ತಿದ್ದಾರೆ ಎಂದು ಸಿ.ಟಿ. ರವಿ ಟೀಕಿಸಿದರು.
ಮಾಜಿ ಸಚಿವರಾದ ಶ್ರೀರಾಮುಲು, ಮುರುಗೇಶ ನಿರಾಣಿ, ಕೆ.ಸಿ. ನಾರಾಯಣಗೌಡ, ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಮುಖಂಡರಾದ ಇಂದ್ರೇಶ್, ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಅಶೋಕ್ ಜಯರಾಮ್, ಮಂಜುನಾಥ ಮೊದಲಾದವರು ಪಾಲ್ಗೊಂಡಿದ್ದರು.
‘ರೈತರನ್ನು ಮರೆತ ಕಾಂಗ್ರೆಸ್ ಸರ್ಕಾರ’
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಕಾಂಗ್ರೆಸ್ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಮತ್ತೊಂದು ಕಡೆ ವಿದ್ಯುತ್ ದರ ಏರಿಸಿ ಬರೆ ಹಾಕುತ್ತಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿಯನ್ನು ರದ್ದುಮಾಡಿ ಮುಸ್ಲಿಂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಧಹನ ನೀಡುತ್ತಿದೆ. ಮುಸ್ಲಿಂ ತುಷ್ಟೀಕರಣ ಮಾಡಿ ಬಹುಸಂಖ್ಯಾತ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ನಾವೀಗ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ. ಅಹಿಂದ ನಾಯಕ ಎಂದು ಹೇಳುವ ಸಿದ್ದರಾಮಯ್ಯನವರ ಸರ್ಕಾರ ಬಡವರು ಮತ್ತು ದಲಿತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಜರಿದರು.
ವಿದ್ಯುತ್ ದರ ಏರಿಸಿದರೆ ಕೈಗಾರಿಕೆ ಉಳಿಯಲು ಸಾಧ್ಯವೇ? ಕಾರ್ಖಾನೆ ಬಾಗಿಲು ಹಾಕಿದರೆ ನಿರುದ್ಯೋಗ ಹೆಚ್ಚಾಗುತ್ತದೆ. ಬಾಣಂತಿಯ ಸರಣಿ ಸಾವಿಗೆ ಕಾಂಗ್ರೆಸ್ ಸರ್ಕಾರ ಕಾರಣ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಉಪಮುಖ್ಯಮಂತ್ರಿ
ಪೊಳ್ಳು ಭರವಸೆ ಅಪಪ್ರಚಾರದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ 80ರಷ್ಟು ಕಮಿಷನ್ ಹಾವಳಿಯಿದೆ. ಹಗರಣಗಳಿಂದ ಕುಖ್ಯಾತಿ ಪಡೆದಿದೆ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ
‘ಉಚಿತ’ ಎಂಬ ಕಾಂಗ್ರೆಸ್ಸಿಗರ ಮಾತಿನ ಉದ್ದೇಶ ಇಂದು ಜನರಿಗೆ ಅರ್ಥವಾಗಿದೆ. ಭರವಸೆ ಈಡೇರಿಸಲಾಗದೆ ನಿತ್ಯ ಹೊಸ ತೆರಿಗೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಬಡಜನರು ಕಂಗಾಲಾಗಿದ್ದಾರೆ.ಸುಮಲತಾ ಅಂಬರೀಷ್ ಮಾಜಿ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.