ADVERTISEMENT

ಮಂಡ್ಯ: ಬೂದನೂರು ಉತ್ಸವ; ನಾಗರಿಕರಿಗೆ 3 ದಿನ ‘ಹೆಲಿ ಟೂರಿಸಂ’

ಬೂದನೂರು ಉತ್ಸವ ಫೆ.21, 22ರಂದು: ಶಾಸಕ ಪಿ.ರವಿಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:10 IST
Last Updated 31 ಜನವರಿ 2026, 6:10 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಕಳೆದ ವರ್ಷದಂತೆ ಈ ಬಾರಿಯೂ ‘ಬೂದನೂರು ಉತ್ಸವ’ವನ್ನು ಫೆ.21 ಮತ್ತು 22ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ‘ಬೂದನೂರು ಉತ್ಸವ-2026’ರ ಪೂರ್ವ ತಯಾರಿ ಚಟುವಟಿಕೆಗಳ ಕುರಿತು ಚರ್ಚಿಸಲು ಶುಕ್ರವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕಳೆದ ಬಾರಿ ಸರ್ಕಾರದಿಂದ ₹15 ಲಕ್ಷ ಮಾತ್ರ ಬೂದನೂರು ಉತ್ಸವಕ್ಕೆ ಬಿಡುಗಡೆ ಮಾಡಲಾಗಿತ್ತು. ಯಾರಿಂದಲೂ ಹಣ ಕೇಳದೆ ಸುಮಾರು ₹1 ಕೋಟಿ ವೆಚ್ಚದಲ್ಲಿ ಕಳೆದ ಬಾರಿ ಬುದನೂರು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು ಎಂದು ಹೇಳಿದರು.

ADVERTISEMENT

ಸ್ಥಳೀಯ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಬಾರಿಯ ಬುದನೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ಪ್ರವಾಸಿಗರನ್ನು ಹಾಗೂ ಸ್ಥಳೀಯರಿಗಾಗಿ ಸದರಿ ವರ್ಷದ ಉತ್ಸವದಲ್ಲಿ ಫೆಬ್ರವರಿ 20ರಿಂದ 3 ದಿನ ರಿಯಾಯಿತಿ ದರದಲ್ಲಿ ‘ಹೆಲಿ ಟೂರಿಸಂ’ ಆಯೋಜನೆ ಮಾಡಲಾಗುತ್ತದೆ ಎಂದರು. 

ಅನಂತ ಪದ್ಮನಾಭ ದೇಗುಲ:

ಕೇರಳದಲ್ಲಿ ಬಿಟ್ಟರೆ ಅನಂತಪದ್ಮನಾಭ ದೇವಾಲಯ ಇರುವುದು ಮಂಡ್ಯ ಜಿಲ್ಲೆಯ ಬೂದನೂರಿನಲ್ಲಿ ಮಾತ್ರ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಬೂದನೂರು ಉತ್ಸವಕ್ಕೆ ಬರಲು ಸಾರ್ವಜನಿಕರಿಗೆ ವಾಹನಗಳ ಸೌಲಭ್ಯ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ವಿವಿಧ ಕಲಾತಂಡಗಳೊಂದಿಗೆ ಹಳೆಬೂದನೂರಿನಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸ್ಥಳೀಯರು ಸಹಕರಿಸಿದರೆ 37 ಪೂಜಾ ಕುಣಿತ ತಂಡಗಳನ್ನು ಮೆರವಣಿಗೆಯಲ್ಲಿ ಆಯೋಜಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುವುದು. ಆಹಾರ ಮೇಳವನ್ನು ಸಹ  ನಡೆಸಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದ ಅಂಗವಾಗಿ ಎಲ್ಲ ಅಧಿಕಾರಿಗಳು ಎರಡು ನಿಮಿಷ ಮೌನಾಚರಣೆ ಮಾಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಹೆಚ್ಚುವರಿ ಎಸ್ಪಿ ತಿಮ್ಮಯ್ಯ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಮನ್‌ಮುಲ್‌ ಅಧ್ಯಕ್ಷ ಶಿವಕುಮಾರ ಪಾಲ್ಗೊಂಡಿದ್ದರು. 

ಉತ್ಸವದ ಅಂಗವಾಗಿ ಸ್ವಾಗತ ವೇದಿಕೆ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮಸ್ಥರು ಮನಸ್ತಾಪ ಬಿಟ್ಟು ಎಲ್ಲರೂ ಒಗ್ಗೂಡಿ ಉತ್ಸವವನ್ನು ಯಶಸ್ವಿಗೊಳಿಸಬೇಕು
ಕುಮಾರ, ಜಿಲ್ಲಾಧಿಕಾರಿ

‘ರಂಗೋಲಿ ಚಿತ್ರಕಲೆ ಸ್ಪರ್ಧೆ’

ಕಸಬಾ ಹೋಬಳಿ ಪ್ರತಿ ಮನೆಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು. ವಿಜೇತರಾದ ಮೂವರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ವೈಯಕ್ತಿಕವಾಗಿ ನನ್ನ ಕಡೆಯಿಂದ ವಿಶೇಷ ಉಡುಗೊರೆ ನೀಡಲಾಗುವುದು. ಹಗ್ಗ–ಜಗ್ಗಾಟ ಕಬಡ್ಡಿ ಹಾಗೂ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್‌ ತಿಳಿಸಿದರು.  ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗುರು ಕಿರಣ್ ಮತ್ತು ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.