ಮದ್ದೂರು: ಮನೆ ಆವರಣದ ಮಧ್ಯೆಯೇ ಚರಂಡಿ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮನೆ ಮಾಲೀಕ ತಾಲ್ಲೂಕಿನ ವೈದ್ಯನಾಥಪುರ ಬಳಿಯ ಬೂದಗುಪ್ಪೆ ನಿವಾಸಿ ಜಯರಾಮ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಯ ಮಧ್ಯೆಯೇ ಚರಂಡಿಯನ್ನು ನಿರ್ಮಿಸಲು ಅಧಿಕಾರಿಗಳು ಮುಂದಾದಾಗ ಜಯರಾಮು ಕುಟುಂಬದವರು ವಿರೋಧ ವ್ಯಕ್ತ ಪಡಿಸಿದರು. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡದೆ ಚರಂಡಿ ನಿರ್ಮಿಸಲು ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ನಮಗೆ ಸೇರಿದ ಈ ಜಾಗದಲ್ಲಿ ಮನೆಯನ್ನು ನಿರ್ಮಿಸಿಕೊಂಡಿರುವುದರ ಜೊತೆಗೆ ಇಲ್ಲಿಯೇ ರೇಷ್ಮೆ ಸಾಗಾಣಿಕೆಯನ್ನು ಕೂಡ ಮಾಡುತ್ತಿದ್ದೇವೆ ಎಂದು ಮಲನೆ ಮಾಲೀಕರು ತಿಳಿಸಿದ್ದಾರೆ.
ಚರಂಡಿ ನಿರ್ಮಿಸುತ್ತಿರುವ ನಮ್ಮ ಜಾಗದ ಸಮೀಪದಲ್ಲೇ ಸರ್ಕಾರಿ ಜಾಗವಿದ್ದು ಆ ಕಡೆ ಚರಂಡಿ ಕಾಮಗಾರಿಯನ್ನು ನಡೆಸಬಹುದಾಗಿತ್ತು. ಆದರೆ ಗ್ರಾಮದ ಕೆಲವರ ಕುಮ್ಮಕ್ಕಿನಿಂದ ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಮಗೆ ಕೆಲವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾ.ಪಂ.ನ ಅಧಿಕಾರಿಗಳ ಬೇಜವ್ದಾರಿತನವೇ ಕಾರಣವಾಗಿದ್ದು, ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಗ್ರಾ.ಪಂ.ನ ಪಿಡಿಓ ಗಮನಕ್ಕೆ ಹಲವು ಬಾರಿ ತಂದಿದ್ದರೂ ಪ್ರಯೋಜನವಾಗಿಲ್ಲವಾಗಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ, ಉಪ ವಿಭಾಗಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಚರಂಡಿ ನೀರು ಮನೆಯ ಒಳಗೆ ಹರಿಯುವುದರಿಂದ ಸೊಳ್ಳೆಗಳು ಹೆಚ್ಚಾಗಿ, ಸಾಂಕ್ರಾಮಿಕ ರೋಗ ಹರಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಿ ಚರಂಡಿ ಕಾಮಗಾರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ವೈಜ್ಞಾನಿಕವಾಗಿ ನಿರ್ಮಿಸಲು ಮುಂದಾಗಬೇಕು ಎಂದು ಗ್ರಾಮದ ನಿವಾಸಿ ಜಯರಾಮು ಹಾಗೂ ಹಲವರು ಒತ್ತಾಯಿಸಿದ್ದಾರೆ.
‘ಮನೆಯ ಮಧ್ಯೆ ಚರಂಡಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಲೂರು ಗ್ರಾ.ಪಂ ಪಿಡಿಒ ಬಸವರಾಜು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.