ADVERTISEMENT

ವೈದ್ಯನಾಥಪುರ: ಸಂಭ್ರಮದ ರಥೋತ್ಸವ

ಮದ್ದೂರು ತಾಲ್ಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:29 IST
Last Updated 6 ಮಾರ್ಚ್ 2021, 3:29 IST
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿರುವ ವೈದ್ಯನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ನೆರವೇರಿತು
ಮದ್ದೂರು ತಾಲ್ಲೂಕಿನ ವೈದ್ಯನಾಥಪುರದಲ್ಲಿರುವ ವೈದ್ಯನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಶುಕ್ರವಾರ ನೆರವೇರಿತು   

ಮದ್ದೂರು: ತಾಲ್ಲೂಕಿನ ಪುರಾಣ ಪ್ರಸಿದ್ಧ, ವೈದ್ಯನಾಥಪುರದಲ್ಲಿರುವ ವೈದ್ಯನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ 10.15ರ ಮೀನ ಲಗ್ನದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಬಂದಿದ್ದರು.

ರಥೋತ್ಸವ ಆರಂಭಕ್ಕೂ ಮುನ್ನ ವೈದ್ಯನಾಥಪುರ ಗ್ರಾಮಸ್ಥರಿಂದ ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೀಸಲು ನೀರು ತರಲಾಯಿತು. ವೈದ್ಯನಾಥೇಶ್ವರ ಸ್ವಾಮಿಯ ಬಸಪ್ಪನ ಜೊತೆಗೆ ಮದ್ದೂರಿನ ಗ್ರಾಮ ದೇವತೆ ಮದ್ದೂರಮ್ಮ, ಆಲೂರಿನ ಆಲೂರಮ್ಮ, ಉಪ್ಪಿನಕೆರೆ ಪಟ್ಟಲದಮ್ಮ, ಹಳೇ ಬೂದನೂರಿನ ಅಂಕನಾಥೇಶ್ವರಸ್ವಾಮಿ ವೀರಗಾಸೆ ಪೂಜಾ ಉತ್ಸವಗಳು ನೆರವೇರಿದವು.

ADVERTISEMENT

ರಥೋತ್ಸವದ ಅಂಗವಾಗಿ ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿ, ಜೆ.ಬ್ಯಾಡರಹಳ್ಳಿಯ ವೈದ್ಯನಾಥೇಶ್ವರ ಸಮಿತಿ ಹಾಗೂ ಗ್ರಾಮಸ್ಥರಿಂದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ವಿರೂಪಾಕ್ಷಿಪುರ, ಬ್ಯಾಡರಹಳ್ಳಿಯ ಗ್ರಾಮಸ್ಥರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಗ್ರಾಮದ ವಿನಾಯಕ ಗೆಳೆಯರ ಬಳಗ ವತಿಯಿಂದ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು. ಮದ್ದೂರಿನ ಸರ್ಕಾರಿ ಬಸ್ ನಿಲ್ದಾಣದಿಂದ ವೈದ್ಯನಾಥಪುರಕ್ಕೆ ಸಾರಿಗೆ ಬಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ರಥೋತ್ಸವದಲ್ಲಿ ಕಳ್ಳರ ಕೈಚಳಕ: ಬ್ರಹ್ಮ ರಥೋತ್ಸವದಲ್ಲಿ ಕಳ್ಳರು ಕಳೆದ ವರ್ಷದಂತೆ ಈ ವರ್ಷವು ತಮ್ಮ ಕೈಚಳಕ ತೋರಿದ್ದು, ದೇವರ ದರ್ಶನಕ್ಕೆ ಬಂದಿದ್ದ ಮಂಡ್ಯ ಮೂಲದ ಬೆಂಗಳೂರು ನಿವಾಸಿ ಸುಂದ್ರಮ್ಮ (40) ಎಂಬವರ 150 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನುಕಳ್ಳರು ಅಪಹರಿಸಿದ್ದಾರೆ. ತೇರನ್ನು ಎಳೆಯುವ ಸಂದರ್ಭದಲ್ಲಿಜನಸಂದಣಿ ಹೆಚ್ಚಾಗಿದ್ದ ಸಂದರ್ಭ ಈ ಕೃತ್ಯ ನಡೆದಿದೆ.

ಕಳೆದ ಬಾರಿಯ ರಥೋತ್ಸವದ ವೇಳೆಯೂ ಸರಗಳ್ಳತನ ಪ್ರಕರಣ ನಡೆದಿತ್ತು. ಪೊಲೀಸರು ಸ್ಥಳದಲ್ಲಿ ಇದ್ದರೂ ಪ್ರಕರಣ ಮರುಕಳಿಸಿದ್ದಕ್ಕೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರು ಆಕ್ರೋಶ ವ್ಯಕ್ತ ಪಡಿಸಿ, ಘಟನೆಗೆ ಪೊಲೀಸರ ಭದ್ರತಾ ವೈಫಲ್ಯವೇ ಕಾರಣ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.