ಚಲುವರಾಯಸ್ವಾಮಿ
ಮಂಡ್ಯ: ‘ಮೈಕ್ರೊಫೈನಾನ್ಸ್ ಕಿರುಕುಳ ಸಂಬಂಧ ಕಠಿಣ ಕಾನೂನು ಕ್ರಮಕ್ಕೆ ಚಿಂತನೆಯಾಗಿದೆ. ಬಡ್ಡಿ ಸುಸ್ತಿಬಡ್ಡಿ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಮಂಡ್ಯದಲ್ಲೂ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಮೈಕ್ರೊಫೈನಾನ್ಸ್ ಸಂಸ್ಥೆಗಳ ಬಗ್ಗೆ ಜನರು ಸಹ ಜಾಗೃತರಾಗಬೇಕು. ನಾವು ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಪಿಎಲ್ಡಿ ಬ್ಯಾಂಕ್, ಸೊಸೈಟಿ, ಇತರ ಬ್ಯಾಂಕ್ಗಳ ಮೂಲಕ ಸಾಲ ತೆಗೆದುಕೊಳ್ಳಬಹುದು. ಮೈಕ್ರೋಫೈನಾನ್ಸ್ಗೆ ಹೋಗೋದನ್ನು ಜನರು ನಿಲ್ಲಿಸಬೇಕು. ಮೈಕ್ರೋಫೈನಾನ್ಸ್ನಲ್ಲಿ ದಾಖಲೆಗಳಿಲ್ಲದೇ ಬೇಗ ಸಾಲ ಸಿಗುತ್ತೆ ಅಂತ ಜನ ಹೋಗುತ್ತಾರೆ. ಆಗ, ಒಂದಕ್ಕೆ ಡಬ್ಬಲ್ ಬಡ್ಡಿ ಹಾಕಿ ಜನಕ್ಕೆ ತೊಂದರೆ ಕೊಡುತ್ತಾರೆ’ ಎಂದು ಹೇಳಿದರು.
ಪುಟ್ಟರಾಜು ಆರೋಪಕ್ಕೆ ತಿರುಗೇಟು:
ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಬೆಂಬಲಿತ ಸಹಕಾರ ಸಂಘ ಸದಸ್ಯರ ಅನರ್ಹ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನಾವು ಅಧಿಕಾರದಲ್ಲಿ ಇಲ್ಲದಿದ್ದಾಗ ಡಿಸಿಸಿ ಬ್ಯಾಂಕ್ನಲ್ಲಿ 9 ಸೀಟು ಗೆದ್ದಿದ್ದೆವು. ಜೆಡಿಎಸ್ನವರು 4 ಸೀಟು ಗೆದ್ದಿದ್ರು. ಆಗ ಬಿಜೆಪಿಯ ಉಮೇಶ್ ಅವರನ್ನು ಅಧ್ಯಕ್ಷ ಮಾಡಿದ್ದರು. ಚುನಾವಣೆ ದಿನ ನಮ್ಮ 4 ಸದಸ್ಯರನ್ನು 24 ಗಂಟೆ ಅನರ್ಹ ಮಾಡಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹತ್ತಿರ ಕಲಿಯಬೇಕು ನಾನು. ಪುಟ್ಟರಾಜು ಅವತ್ತು ಏನು ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಇಂದು ಸಹ ನಾಲ್ವರು ಅಭ್ಯರ್ಥಿಗಳದ್ದು ಸ್ಟೇ ಇದೆ. ಸ್ಟೇ ತೆಗೆದರೆ ಅವರು ಅಭ್ಯರ್ಥಿಗಳೇ ಆಗುವಂತಿಲ್ಲ’ ಎಂದು ಚಲುವರಾಯಸ್ವಾಮಿ ಅವರು ಪುಟ್ಟರಾಜು ಅವರ ಆರೋಪಕ್ಕೆ ತಿರುಗೇಟು ನೀಡಿದರು.
‘ಸಹಕಾರ ಇಲಾಖೆಯಲ್ಲಿ ನಾವು ಅವರಷ್ಟು ಕೆಳಗೆ ಇಳಿದು ಚುನಾವಣೆ ಮಾಡಲ್ಲ. ಸೂಪರ್ ಸೀಡ್ ಆಗುವ ಸೊಸೈಟಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಡಿ ಅನ್ನೋಕೆ ಆಗುತ್ತಾ?. ಕಾನೂನು ಬಾಹಿರ ಸೊಸೈಟಿಗಳ ವಿರುದ್ಧ ಕ್ರಮ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.