ADVERTISEMENT

ಬಾಲ್ಯ ವಿವಾಹ ತಲೆ ತಗ್ಗಿಸುವ ವಿಚಾರ

ನ್ಯಾಯಾಧೀಶ ಎಂ.ಆನಂದ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:23 IST
Last Updated 11 ಜುಲೈ 2025, 6:23 IST
ಮಂಡ್ಯ ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ರಿಪಬ್ಲಿಕ್‌ ಸೆಂಟ್ರಲ್‌ ಸ್ಕೂಲ್‌ ಅವರಣದಲ್ಲಿ ನಡೆದ ಮಕ್ಕಳ ಕಾನೂನುಗಳು ಹಾಗೂ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಆನಂದ್‌ ಉದ್ಘಾಟಿಸಿದರು
ಮಂಡ್ಯ ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ರಿಪಬ್ಲಿಕ್‌ ಸೆಂಟ್ರಲ್‌ ಸ್ಕೂಲ್‌ ಅವರಣದಲ್ಲಿ ನಡೆದ ಮಕ್ಕಳ ಕಾನೂನುಗಳು ಹಾಗೂ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಆನಂದ್‌ ಉದ್ಘಾಟಿಸಿದರು   

ಮಂಡ್ಯ: ಬಾಲ್ಯ ವಿವಾಹ ಇನ್ನೂ ಜೀವಂತವಾಗಿದೆ ಎಂದರೆ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್‌ ವಿಷಾದಿಸಿದರು.

ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ರಿಪಬ್ಲಿಕ್‌ ಸೆಂಟ್ರಲ್‌ ಸ್ಕೂಲ್‌ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಬೆಂಗಳೂರು), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಘೋಷಣೆ ಅಂಗವಾಗಿ ಸೋಮವಾರ ನಡೆದ ಮಕ್ಕಳ ಕಾನೂನುಗಳು ಹಾಗೂ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಪ್ರಾಪ್ತ ವಯಸ್ಸಿನ ಗರ್ಭಿಣಿ ಹಾಗೂ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಲ್ಯ ವಿವಾಹ ಮಾಡುವುದು ನಿಲ್ಲಬೇಕು’ ಎಂದು ತಿಳಿಸಿದರು.

ADVERTISEMENT

‘ಮಕ್ಕಳು ಆಟ ಆಡುವ ವಯಸ್ಸಿನಲ್ಲಿ ಮದುವೆ ಮಾಡುವುದು ಏಕೆ? ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಮಕ್ಕಳಿಗೆ ಸಹಾಯ ಮಾಡುವುದನ್ನು ಬಿಟ್ಟು ಬಾಲ್ಯ ವಿವಾಹವೆಂಬುವ ಪಿಡುಗಿಗೆ ದೂಡುವುದನ್ನು ಸಂಪೂರ್ಣವಾಗಿ ವಿರೋಧಿಸುವ ಮೂಲಕ ಎಚ್ಚರಿಕೆ ನೀಡಬೇಕು. ಯಾರೇ ಬಾಲ್ಯ ವಿವಾಹ ಮಾಡಿದರೆ ಮತ್ತು ಅದನ್ನು ಪ್ರೋತ್ಸಾಹಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬಹುದೆಂಬ ಕಾನೂನು ತಿಳಿಸಬೇಕು’ ಎಂದು ಸಲಹೆ ನೀಡಿದರು.

ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಮಿಕ್ಕೆರೆ ವೆಂಕಟೇಶ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ(ದಕ್ಷಿಣ ವಲಯ)ಮಹದೇವು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಸ್ಕೂಲ್‌ ಕಾರ್ಯದರ್ಶಿ ಮಂಜುನಾಥ್‌, ಪ್ರಾಂಶುಪಾಲೆ ಸುನೀತಾ, ಕಾರ್ಯಕ್ರಮ ಸಂಯೋಜನಾಧಿಕಾರಿ ರಾಜೇಂದ್ರ ಭಾಗವಹಿಸಿದ್ದರು.

‘ಮಕ್ಕಳನ್ನು ಅಪಾಯಕ್ಕೆ ಸಿಲಿಕಿಸುವ ನಡೆ ಖಂಡನೀಯ’

‘ಪ್ರಾಪಂಚಿಕ ಜ್ಞಾನ ಪಡೆದಿರದ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಾದರೂ ಯಾವ ಪುರುಷಾರ್ಥಕ್ಕೆ? ಏಕೆಂದರೆ ಈ ಮಕ್ಕಳಿಗೆ ಜೀವನವೇ ಸರಿಯಾಗಿ ತಿಳಿದಿರುವುದಿಲ್ಲ. ಅಂತಹದ್ದರಲ್ಲಿ ಮಕ್ಕಳಿಗೆ ಮದುವೆ ಮಾಡಿ ಅವರ ಭವಿಷ್ಯ ಹಾಳು ಮಾಡುವ ಮೂಲಕ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಮಕ್ಕಳಿಗೆ ಮಕ್ಕಳಾಗುವಂತೆ ಮಾಡಿ ಅಪಾಯಕ್ಕೆ ಸಿಲಿಕಿಸುವ ನಡೆ ಖಂಡನೀಯ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಂಗಾಂಧರಸ್ವಾಮಿ ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.