ADVERTISEMENT

ನಾಗಮಂಗಲ: ಐವರು ಸಾಧಕರಿಗೆ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ

ಜನಪದ ತವರೂರಾದ ಆದಿಚುಂಚನಗಿರಿ ಮಠ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:21 IST
Last Updated 26 ಸೆಪ್ಟೆಂಬರ್ 2025, 6:21 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಬಿಜಿಎಸ್ ಸಭಾ ಭವನದಲ್ಲಿ ಆರಂಭವಾದ ಜಾನಪದ ಕಲಾಮೇಳದಲ್ಲಿ ಸಾಧಕರಿಗೆ ‘ಚುಂಚಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು 
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಬಿಜಿಎಸ್ ಸಭಾ ಭವನದಲ್ಲಿ ಆರಂಭವಾದ ಜಾನಪದ ಕಲಾಮೇಳದಲ್ಲಿ ಸಾಧಕರಿಗೆ ‘ಚುಂಚಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು    

ನಾಗಮಂಗಲ: ಶ್ರೀಕ್ಷೇತ್ರ ಆದಿಚುಂಚನಗಿರಿ ಮಠವು ಜನಪದರಿಗೆ ತವರುಮನೆ ಇದ್ದಂತೆ, ಜಾನಪದ ಕಲೆಗಳ ಪ್ರದರ್ಶನ ಹಾಗೂ ‌ಕಲಾವಿದರ ನೆರವಿಗೆ ಮಠವು ಸದಾ ಸಹಕರಿಸುತ್ತಾ ಬಂದಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾ ಭವನದಲ್ಲಿ ಬುಧವಾರ ಆರಂಭವಾದ 46ನೇ ಕಾಲಭೈರವೇಶ್ವರ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ಪ್ರಚಾರದ ಅಬ್ಬರವಿಲ್ಲದೆ ಪ್ರತಿ ವರ್ಷ ಜಾನಪದ ಕಲಾವಿದರು ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸದಾಶಯದಂತೆ ಅವರ ಪಟ್ಟಾಭಿಷೇಕದ ದಿನದಂದು ಶ್ರೀಕ್ಷೇತ್ರದಲ್ಲಿ ಜಾನಪದ ಪ್ರಾಕಾರಗಳನ್ನು ಪ್ರದರ್ಶಿಸುವುದು ಅತ್ಯಂತ ಹೆಮ್ಮೆ ಸಂಗತಿ ಎಂದರು.

ADVERTISEMENT

ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ನಮ್ಮ ಜಾನಪದ ಕಲೆ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ರವಾನೆಯಾಗಬೇಕು. ಆ ನಿಟ್ಟಿನಲ್ಲಿ ಕ್ರಾಂತಿ ಮಾಡಿರುವ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಾಧನೆ ಅಜರಾಮರ ಎಂದು ಶ್ಲಾಘಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದರು.

ಪ್ರಶಸ್ತಿ ಪ್ರದಾನ; ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎಚ್.ಎಂ.ವೆಂಕಟಪ್ಪ, ಜಿ.ನಾರಾಯಣ, ಡಾ.ಎಲ್.ಹನುಮಂತಯ್ಯ, ಡಾ.ಸಿ.ಹೊನ್ನೇಗೌಡ, ಜಿ.ಡಿ.ತಿಮ್ಮಯ್ಯ ಅವರಿಗೆ ತಲಾ ₹50 ಸಾವಿರ, ನೆನಪಿನ ಕಾಣಿಕೆ, ಫಲಕಗಳನ್ನೊಳಗೊಂಡ 2025ನೇ ಸಾಲಿನ ಚುಂಚಶ್ರೀ ಪ್ರಶಸ್ತಿ ನೀಡಲಾಯಿತು.

ಉತ್ತರ ಕರ್ನಾಟಕದ ಗೊರವರ ಕುಣಿತ ಕಲಾವಿದ ಮಲ್ಲಯ್ಯ ಮತ್ತು ಕೀಲಾರ ಪೂಜಾ ಕುಣಿತದ ಸಿದ್ದೇಗೌಡ, ಜಾನಪದ ಕಲಾವಿದರಿಗೆ ನಾಡೋಜ ಎಚ್.ಎಲ್‌.ನಾಗೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬೆಳ್ಳಿರಥದಲ್ಲಿ ಮೆರವಣಿಗೆ: ಬೆಟ್ಟದ ತಪ್ಪಲಿನ ಗಣೇಶ ದೇವಾಲಯದ ಮುಂಭಾಗದಿಂದ ಬಿಜಿಎಸ್ ಸಭಾಂಗಣದವರೆಗೆ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸರ್ವಾಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಮೇಳೈಸಿದ ಜಾನಪದ ಜಾತ್ರೆ: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳಿಂದ ವೇದಿಕೆ ಮೇಲೆ ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ಭಜನೆ, ಕೀರ್ತನೆ, ತಮಟೆ ವಾದ್ಯಗಳು ಮೇಳೈಸಿದ ರೀತಿ ಜಾನಪದ ಜಾತ್ರೆ ಮೆರುಗೆ ಇಮ್ಮಡಿಗೊಳಿಸಿತು. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳನ್ನೊಳಗೊಂಡಂತೆ 500ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿವಿ ಉಪಕುಲಪತಿ ಎಸ್.ಎನ್.ಶ್ರೀಧರ, ಜಾನಪದ ಪರಿಷತ್ತಿನ ಹಿ.ಚಿ.ಬೋರಲಿಂಗಯ್ಯ, ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಎ.ಟಿ.ಶಿವರಾಮು ಭಾಗವಹಿಸಿದ್ದರು.

ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರು ಜಾನಪದ ಕಲೆ ಪ್ರದರ್ಶಿದರು
ಇಂದಿನ ಟಿ.ವಿ ಚಲನಚಿತ್ರ ಸಾಮಾಜಿಕ ಮಾಧ್ಯಮ ಹಾವಳಿಗಳ ನಡುವೆಯೂ ಜಾನಪದ ಜೀವಂತವಾಗಿರುವುದಕ್ಕೆ ಕಲಾವಿದರೇ ಕಾರಣ
ಜಿ.ಪರಮೇಶ್ವರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.