ADVERTISEMENT

ಮುಚ್ಚಿದ್ದ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ

ಶೂನ್ಯ ದಾಖಲೆಯಿಂದ ಮುಚ್ಚಿದ್ದ ಗೂಡೆಹೊಸಹಳ್ಳಿಯ ಸರ್ಕಾರಿ ಶಾಲೆ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:15 IST
Last Updated 8 ಜನವರಿ 2021, 6:15 IST
ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿಯಲ್ಲಿ ಮುಚ್ಚಿದ್ದ ಸರ್ಕಾರಿ ಶಾಲೆಗೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಚಾಲನೆ ನೀಡಿದರು
ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿಯಲ್ಲಿ ಮುಚ್ಚಿದ್ದ ಸರ್ಕಾರಿ ಶಾಲೆಗೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಚಾಲನೆ ನೀಡಿದರು   

ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಗ್ರಾಮವಾದ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಸ್ವಾತಂತ್ರ್ಯಪೂರ್ವದ ಶಾಲೆ ಶೂನ್ಯ ದಾಖಲೆಯಿಂದ ಮುಚ್ಚಲಾಗಿದ್ದ ಶಾಲೆ ಮತ್ತೆ ಆರಂಭಗೊಂಡಿತು.

ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು, ಸಕಲೇಶಪುರದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಮದ ಹರೀಶ್ ಅವರ ಇಚ್ಛಾಶಕ್ತಿಯಿಂದ ಆರಂಭಗೊಂಡು ಹಬ್ಬದ ವಾತಾವರಣ ಮೂಡಿತು.

ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಅಕ್ಕಪಕ್ಕದ ಹಳ್ಳಿಗಳಿಂದ ಸಾಕಷ್ಟು ಮಕ್ಕಳು ಬರುತ್ತಿದ್ದರು. 2 ವರ್ಷಗಳಿಂದ ಶೂನ್ಯ ದಾಖಲೆ, ಖಾಸಗಿ ಶಾಲೆಗಳ ಭರಾಟೆಯಿಂದ ಮುಚ್ಚಲಾಗಿತ್ತು. ಇದನ್ನು ಕಂಡ ಹರೀಶ್ ಅವರು ಗ್ರಾಮದ ಹಿರಿಯರು, ಯುವಕರೊಂದಿಗೆ ಚರ್ಚಿಸಿ ಶಾಲೆ ಆರಂಭಿಸಲು ಮನೆಮನೆಗೆ ತೆರಳಿ ಪೋಷಕರನ್ನು ಮನವೊಲಿಸಿದರು.

ADVERTISEMENT

ಗ್ರಾಮಸ್ಥರ ಉತ್ಸಾಹಕ್ಕೆ ಸ್ಪಂದಿಸಿದ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಅವರು ಗುರುವಾರ ಶಾಲೆಯ ಆರಂಭಕ್ಕೆ ಚಾಲನೆ ನೀಡಿದರು.

ತಾಲ್ಲೂಕಿನ 4 ಗ್ರಾಮಗಳಲ್ಲಿ ಶೂನ್ಯ ದಾಖಲೆ ನೆಪದಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು. ಇದೇ ರೀತಿ 11 ಶಾಲೆಗಳಿದ್ದು, ಎಲ್ಲವನ್ನೂ ಆರಂಭಿಸಲಾಗುವುದು. ಮಕ್ಕಳ ಮನಸ್ಸನ್ನು ಬಾಡಿಸದೆ ಉಳಿಸಿ, ಬೆಳೆಸಿ. ಶಿಕ್ಷಣ ಬಲುದೊಡ್ಡ ಆಸ್ತಿ ಎನ್ನುವುದಕ್ಕೆ ಹರೀಶ್ ಅವರೇ ಸಾಕ್ಷಿ. ಖಾಸಗಿ ಶಾಲೆಯ ವ್ಯಾಮೋಹ ಬಿಡಿ ಎಂದು ಮನವಿ ಮಾಡಿದರು.

ಹರೀಶ್ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರು ಸರ್ಕಾರಿ ಶಾಲೆಯ ಶಿಕ್ಷಕರು ಎಂಬುದನ್ನು ಅರಿಯಬೇಕು. ನಾನು ಓದಿರುವುದು ಸರ್ಕಾರಿ ಶಾಲೆಯಲ್ಲಿಯೇ, ಅದು ನಮ್ಮೂರ ಈ ಶಾಲೆಯಲ್ಲಿಯೇ. ಖಾಸಗಿ ಶಾಲೆಯಲ್ಲಿ ದೊಡ್ಡ ಬಿಲ್ಡಿಂಗ್, ಹೈಟೆಕ್ ವಾಹನ, ಮಿರುಗುವ ಯೂನಿಫಾರಂಗೆ ಮರಳಾಗುವುದು ಬೇಡ. ನನ್ನ ಮಗಳನ್ನೂ ಸರ್ಕಾರಿ ಶಾಲೆಯಲ್ಲಿ ಓದಿಸುವೆ’ ಎಂದರು.

ಗ್ರಾ.ಪಂ ಸದಸ್ಯರ ಭರವಸೆ: ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳಲಾಗುವುದು. ಶಾಲೆಗೆ ಮೂಲ ಸೌಲಭ್ಯಕ್ಕಾಗಿ ಗ್ರಾಪಂ. ನಿಂದ ಅನುದಾನ ತರಲಾಗುವುದು ಎಂದು ಗ್ರಾ ಪಂ ಸದಸ್ಯರಾದ ಕೃಷ್ಣೇಗೌಡ, ಜಯಲಕ್ಷ್ಮಮ್ಮ, ಬೇಬಿ ಹೇಳಿದರು.

ಗ್ರಾಮವು ತಳಿರು ತೋರಣ, ರಂಗೋಲಿ, ಮಾವಿನ ಸೊಪ್ಪಿನಿಂದ ಕಂಗೊಳಿಸುತ್ತಿತ್ತು. ಊರಿನ ದೊಡ್ಡ ಹಬ್ಬದಂತೆ ನಡೆದ ಸಭೆಗೆ ಗ್ರಾಮಸ್ಥರು ಭಾಗವಹಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮಕ್ಕಳಿಗೆ ಪುಷ್ಪ, ಪಠ್ಯ ಸಾಮಗ್ರಿ ನೀಡಿ ಬರಮಾಡಿಕೊಳ್ಳಲಾಯಿತು. ಶಾಲಾರಂಭಕ್ಕೆ ಶ್ರಮಿಸಿದ ಗಣ್ಯರನ್ನು ಗೌರವಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಇಸಿ‌ಒ ಸೋಮಶೇಖರ್, ನೀಲಾಮಣಿ, ಶ್ರೀನಿವಾಸ್, ತಾ. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಲ್.ಎಸ್. ಧರ್ಮಪ್ಪ, ಉಪಾಧ್ಯಕ್ಷ ಪದ್ಮೇಶ್, ಕಾರ್ಯದರ್ಶಿ ಲಕ್ಷ್ಮಣಗೌಡ, ತಾ. ನೌಕರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಪದಾಧಿಕಾರಿಗಳಾದ ಆನಂದಕುಮಾರ್, ಮೋಹನ್‌ಕುಮಾರಿ. ಮುಖ್ಯಶಿಕ್ಷಕ ದೇವರಾಜೇಗೌಡ, ಗ್ರಾಪಂ. ಸದಸ್ಯರಾದ ಕೃಷ್ಣೇಗೌಡ, ಬೇಬಿ, ಜಯಲಕ್ಷ್ಮೀ, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.