ಮಂಡ್ಯ: ಮಂಗಳವಾರ ಒಂದೇ ದಿನ 245 ಮಂದಿಯಲ್ಲಿ ಕೋವಿಡ್–19 ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 5,887ಕ್ಕೆ ಏರಿಕೆಯಾಗಿದೆ. ಮಂಗಳವಾರ ಇಬ್ಬರು ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ಕೆ.ಆರ್.ಪೇಟೆ ತಾಲ್ಲೂಕಿನ 48 ವರ್ಷ ವಯಸ್ಸಿನ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಕೋವಿಡ್ ಪತ್ತೆಯಾದ ಕಾರಣ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಪಾಂಡವಪುರ ತಾಲ್ಲೂಕಿನ 60 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ಧಾರೆ. ಕೋವಿಡ್ ಕಾರ್ಯಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಂಗಳವಾರ ಪತ್ತೆಯಾದ 245 ರೋಗಿಗಳಲ್ಲಿ ಮಂಡ್ಯ ತಾಲ್ಲೂಕೊಂದರಲ್ಲೇ 95 ಮಂದಿ ಇದ್ದಾರೆ. ಕೆ.ಆರ್.ಪೇಟೆ 37, ಪಾಂಡವಪುರ 31, ಶ್ರೀರಂಗಪಟ್ಟಣ 29, ಮಳವಳ್ಳಿ 20, ನಾಗಮಂಗಲ ತಾಲ್ಲೂಕಿನ 13 ಮಂದಿ ಇದ್ದಾರೆ.
ಕೋವಿಡ್ನಿಂದ ಗುಣಮುಖರಾದ 154 ಮಂದಿಯನ್ನು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಮಳವಳ್ಳಿ ತಾಲ್ಲೂಕಿನ 43 ಮಂದಿ, ಶ್ರೀರಂಗಪಟ್ಟಣ 33, ಮಂಡ್ಯ 28, ಕೆ.ಆರ್.ಪೇಟೆ 23, ಮದ್ದೂರು 20, ನಾಗಮಂಗಲ ತಾಲ್ಲೂಕಿನ ನಾಲ್ವರನ್ನು ಮನೆಗೆ ಕಳುಹಿಸಲಾಯಿತು. ಒಟ್ಟು ರೋಗಿಗಳಲ್ಲಿ 3,996 ಮಂದಿ ಗುಣಮುಖರಾಗಿದ್ದಾರೆ. 1,825 ಪ್ರಕರಣಗಳು ಸಕ್ರಿಯವಾಗಿವೆ.
ಒಟ್ಟು ಗೋಗಿಗಳಲ್ಲಿ 310 ಮಂದಿ ಜಿಲ್ಲಾಸ್ಪತ್ರೆಯಲ್ಲಿದ್ದಾರೆ. 196 ಮಂದಿ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಇದ್ದಾರೆ. ಉಳಿದ ರೋಗಿಗಳು ಆಯಾ ತಾಲ್ಲೂಕು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಇರಿಸಲಾಗಿದೆ. ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಇನ್ನೂ 250 ಹಾಸಿಗೆ ಸಾಮರ್ಥ್ಯ ವಾರ್ಡ್ ದೊರೆಯುತ್ತದೆ. ಇದರ ಜೊತೆಗೆ ಕೆರೆಯಂಗಳದ ವಸತಿ ನಿಲಯದಲ್ಲಿ 500 ಹಾಸಿಗೆ ಸಾಮರ್ಥ್ಯದ ವಾರ್ಡ್ ಸಿದ್ಧಗೊಂಡಿದೆ. 332 ರೋಗಿಯನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕೋವಿಡ್ ಅಂಕಿ–ಅಂಶ
ಜಿಲ್ಲೆಯಲ್ಲಿ ಒಟ್ಟು: 5,887
ಸಕ್ರಿಯ ಪ್ರಕರಣ: 1,825
ಏರಿಕೆ: 245
ಗುಣಮುಖ: 3,996
ಏರಿಕೆ: 154
ಸಾವು: 65
ಏರಿಕೆ: 02
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.